ADVERTISEMENT

ಸೇವೆ ಕಾಯಂಗೆ ಆಯುಷ್ ವೈದ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 6:34 IST
Last Updated 6 ಡಿಸೆಂಬರ್ 2012, 6:34 IST

ರಾಯಚೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಯುಷ್ ವೈದ್ಯಾಧಿಕಾರಿಗಳನ್ನು ಕಾಯಂಗೊಳಿಸಬೇಕು ಹಾಗೂ ಸಮಾನ ವೇತನ, ಪ್ರಯಾಣ ಭತ್ಯೆ ಹಾಗೂ ದಿನ ಭತ್ಯೆವನ್ನು ನೀಡಬೇಕು ಎಂದು ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು.

ಬುಧವಾರ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕಳೆದ 6ರಿಂದ 7 ವರ್ಷಗಳಿಂದಲೂ ಅಲೋಪತಿ ವೈದ್ಯರ ಕೊರತೆಯನ್ನು ನೀಗಿಸಿ ಗುತ್ತಿಗೆ ಆಯುಷ್ ವೈದ್ಯರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು

ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಆಯುಷ್ ವೈದ್ಯಾಧಿಕಾರಿಗಳನ್ನು ಕಾಯಂಗೊಳಿಸಬೇಕು ಎಂದು ಮನವಿ ಮಾಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಾಸಿಕ ಹಾಗೂ ಉಪ ಕೇಂದ್ರಗಳಿಗೆ ಭೇಟಿ ಸೇರಿದಂತೆ ಅನೇಕ ಕೆಲಸಗಳಿಗೆ  ವೈದ್ಯಾಧಿಕಾರಿಗಳಿಗೆ ಪ್ರಯಾಣದ ಭತ್ಯೆ ನೀಡಬೇಕು, ದಿನದ ಭತ್ಯೆಯನ್ನು ಅಲೋಪತಿ ವೈದ್ಯರಿಗೆ ಮಾತ್ರ ನೀಡಲಾಗುತ್ತಿದ್ದು, ಆಯುಷ್ ವೈದ್ಯಾಧಿಕಾರಿಗಳಿಗೂ ನೀಡಬೇಕು ಎಂದು ಆಗ್ರಹಿಸಿದರು.

ಆಯುಷ್ ವೈದ್ಯಾಧಿಕಾರಿಗಳಿಗೆ ನಿಗದಿಪಡಿಸಿದ ಸಮಯಕ್ಕೆ ವೇತನ ನೀಡಬೇಕು, ಔಷಧಿಗಳ ಸರಬರಾಜು ಕ್ರಮ ಕೈಗೊಳ್ಳಬೇಕು, ಆಯುಷ್ ವೈದ್ಯಾಧಿಕಾರಿಗಳನ್ನು ಕಾಯಂಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಡಾ.ಮಂಜುನಾಥ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಆಯುಷ್ ವೈದ್ಯಾಧಿಕಾರಿಗಳಾದ ಡಾ.ವಿರುಪಾಕ್ಷಿ, ಡಾ.ಬಸವರಾಜ, ಡಾ.ಸುಂಕದ, ಡಾ.ಬಸವರಾಜ ಅಂಗಡಿ, ಡಾ.ಭಾರತಿ ಜೀವನೇಶ್ವರಯ್ಯ, ಡಾ.ವಿಶ್ವನಾಥ, ಡಾ.ನಾಗರಾಜ, ಡಾ.ಸುನೀಲ್, ಡಾ.ಭಾರತಿ ಡಾ.ಜೀವನೇಶ್ವರಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.