ADVERTISEMENT

ಹಟ್ಟಿ ಚಿನ್ನದ ಗಣಿಗೆ ಪ್ರಶಸ್ತಿಗಳ ಗರಿ

ಎಂ.ಖಾಸಿಂ ಅಲಿ
Published 26 ನವೆಂಬರ್ 2017, 6:23 IST
Last Updated 26 ನವೆಂಬರ್ 2017, 6:23 IST
ನವದೆಹಲಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ‘ರಾಷ್ಟ್ರೀಯ ಸುರಕ್ಷಾ ಪ್ರಶಸ್ತಿ’ಯನ್ನು ಸ್ವೀಕರಿಸಿದ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಬಿ.ಆರ್‌.ಯಾವಗಲ್‌ ಹಾಗೂ ಗಣಿ ಕಾರ್ಮಿಕರ ವಿಭಾಗದ ಮೇಲ್ವಿಚಾರಕ ಪಿ.ಎಸ್. ಮುರಳಿ ಮೋಹನ
ನವದೆಹಲಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ‘ರಾಷ್ಟ್ರೀಯ ಸುರಕ್ಷಾ ಪ್ರಶಸ್ತಿ’ಯನ್ನು ಸ್ವೀಕರಿಸಿದ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಬಿ.ಆರ್‌.ಯಾವಗಲ್‌ ಹಾಗೂ ಗಣಿ ಕಾರ್ಮಿಕರ ವಿಭಾಗದ ಮೇಲ್ವಿಚಾರಕ ಪಿ.ಎಸ್. ಮುರಳಿ ಮೋಹನ   

ಹಟ್ಟಿ ಚಿನ್ನದ ಗಣಿ: ದೇಶದಲ್ಲಿ ಅತಿ ಹೆಚ್ಚು ಚಿನ್ನದ ಉತ್ಪಾದನೆಗೆ ಹೆಸರಾಗಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಈಗ ಸುರಕ್ಷಿತ ಗಣಿಗಾರಿಕೆ ನಡೆಸಿದ ಕಾರಣಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು, ಗಣಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ಗಣಿ ಸುರಕ್ಷತಾ ನಿರ್ದೇಶನಾಲಯವು (ಡಿಜಿಎಂಎಸ್‌) ದೇಶದ ವಿವಿಧ ರಾಜ್ಯಗಳಿಂದ ಭೂ ಕೆಳ ಮೈ ವಿಭಾಗದಲ್ಲಿ ಕಾರ್ಮಿಕರ ಸುರಕ್ಷತೆ ಮತ್ತು ಉತ್ಪಾದನೆ ಸೇರಿದಂತೆ ಪರಿಸರ ಸಂರಕ್ಷಣೆಯಲ್ಲಿ ಉತ್ತಮ ಸಾಧನೆ ಮಾಡಿದ ಗಣಿಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತದೆ. ಹಟ್ಟಿ ಚಿನ್ನದ ಗಣಿಯು 2013 ಮತ್ತು 2014ರಲ್ಲಿ ಅಪಘಾತ ಸಂಭವಿಸದಂತೆ ಭೂ ಕೆಳಮೈಯಲ್ಲಿ ಗಣಿಗಾರಿಕೆ ಕಾರ್ಯ ನಡೆಸಿದಕ್ಕಾಗಿ ಅತ್ಯುನ್ನತ ಪ್ರಶಸ್ತಿಯಾದ ‘ರಾಷ್ಟ್ರೀಯ ಸುರಕ್ಷಾ ಪ್ರಶಸ್ತಿ’ ಪಡೆದುಕೊಂಡಿದೆ.

ಕಳೆದ ಆಗಸ್ಟ್‌ನಲ್ಲಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು. ಗಣಿ ಆಡಳಿತ ವರ್ಗದಿಂದ ಕಂಪೆನಿಯ ಅಧ್ಯಕ್ಷ ಬಿ.ಆರ್‌. ಯಾವಗಲ್‌, ವ್ಯವಸ್ಥಾಪಕ ನಿರ್ದೇಶ ಟಿ.ಎಚ್‌.ಎಂ. ಕುಮಾರ್‌, ಪ್ರಧಾನ ವ್ಯವಸ್ಥಾಪಕ(ಗಣಿ) ಪ್ರಕಾಶ, ಪ್ರಧಾನ ವ್ಯವಸ್ಥಾಪಕ(ಸಮನ್ವಯ) ಡಾ. ಪ್ರಭಾಕರ ಸಂಗೂರ ಮಠ ಹಾಗೂ ಹಿರಿಯ ವ್ಯವಸ್ಥಾಪಕ ಎಂ. ಶಾಂತಕುಮಾರ ಹಾಗೂ ಕಾರ್ಮಿಕರ ಪರವಾಗಿ ಗಣಿ ಮೇಲ್ವಿಚಾರಕ ಪಿ.ಎಸ್. ಮುರಳಿ ಮೋಹನ್‌ ಹಾಗೂ ತಾಂತ್ರಿಕ ವಿಭಾಗದ ಸಹಾಯಕ ಆಂಥೋನಿ ಡಿ ಮೊನ್ಟೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ADVERTISEMENT

ಗಣಿ ರಕ್ಷಣಾ ತಂಡಕ್ಕೆ ಪ್ರಶಸ್ತಿ: ಗಣಿಯಲ್ಲಿ ಸಂಭವಿಸುವ ಅಪಘಾತ ಹಾಗೂ ಬೇರೆ ಬೇರೆ ರಕ್ಷಣಾ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರದ ಗಣಿ ಸುರಕ್ಷಣಾ ನಿರ್ದೇಶನಾಲಯ ಖನಿಜ ಗಣಿಗಳಿಗಾಗಿ ಏರ್ಪಡಿಸುವ ರಾಷ್ಟ್ರಮಟ್ಟದ ಅಣಕು ಪ್ರದರ್ಶನ ಸ್ಪರ್ಧೆಯಲ್ಲಿ ಹಟ್ಟಿ ಚಿನ್ನದ ಗಣಿ ರಕ್ಷಣಾ ತಂಡವು 2012ರಿಂದ 2015ರವರೆಗೆ ಸತತವಾಗಿ ಪ್ರಶಸ್ತಿಗಳನ್ನು ಗೆದ್ದುಕೊಂಡು ಗಮನ ಸೆಳೆದಿದೆ. ದಶಕಗಳಿಂದ ಈ ಸ್ಪರ್ಧೆಗಳಲ್ಲಿ ಉತ್ತರ ಭಾರತದ ಗಣಿಗಳದ್ದೇ ಮೇಲುಗೈ ಇರುತ್ತಿತ್ತು. ರಾಜ್ಯ ಸರ್ಕಾರದ ಪ್ರತಿಷ್ಠಿತ ಸಂಸ್ಥೆ ಹಟ್ಟಿ ಚಿನ್ನದ ಗಣಿಯ ರಕ್ಷಣಾ ತಂಡವು ಪ್ರಶಸ್ತಿ ಪಡೆದುಕೊಂಡಿದ್ದು, ರಾಜ್ಯದ ಹೆಸರು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿದೆ.

ಪರಿಸರ ಪ್ರಶಸ್ತಿ: ಪರಿಸರ ರಕ್ಷಣೆಗಾಗಿ ‘ನ್ಯಾಷನಲ್‌ ಜಿಯೋಸೈನ್ಸ್‌’ ಪ್ರಶಸ್ತಿ ಲಭಿಸಿದೆ. 2014ರಲ್ಲಿ ನಡೆದ ‘ಗಣಿ ಪರಿಸರ ಹಾಗೂ ಖನಿಜ ಸಂಪನ್ಮೂಲ ಸಂರಕ್ಷಣಾ ಸಪ್ತಾಹ’ದಲ್ಲಿ ವಿವಿಧ ವಿಭಾಗಗಳಲ್ಲಿ ಪರಿಸರ ನಿರ್ವಹಣೆಗಾಗಿ 20 ಪ್ರಶಸ್ತಿಗಳು ಬಂದಿವೆ. ಸರ್ಕಾರಿ ಸ್ವಾಮ್ಯದ ಸಂಸ್ಥೆ ಯಾದ ಹಟ್ಟಿ ಚಿನ್ನದ ಗಣಿ ಕಾರ್ಯ ನಿರ್ವಹಣೆಯಲ್ಲಿ ಇತರ ಉದ್ಯಮ ಸಂಸ್ಥೆಗಳ ವಲಯದಲ್ಲಿ ಮಾದರಿಯಾಗಿದೆ.

* * 

ಕಂಪೆನಿಯ ಎಲ್ಲಾ ಕಾರ್ಮಿಕರು, ಸಿಬ್ಬಂದಿ ಹಾಗೂ ಅಧಿಕಾರಿಗಳ ಪರಿಶ್ರಮದ ಫಲವಾಗಿ ರಾಷ್ಟ್ರಮಟ್ಟದ ಈ ಅತ್ಯುನ್ನತ ಪ್ರಶಸ್ತಿಯು ಸಂಸ್ಥೆಗೆ ಲಭಿಸಿದೆ.
ಟಿ.ಎಚ್‌.ಎಂ. ಕುಮಾರ್‌
ವ್ಯವಸ್ಥಾಪಕ ನಿರ್ದೇಶಕ, ಹಟ್ಟಿ ಚಿನ್ನದ ಗಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.