ಯಲಬುರ್ಗಾ: ಪ್ರಾದೇಶಿಕ ಅಸಮಾನತೆಯಿಂದಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜನತೆಯು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವುದನ್ನು ಹೋಗಲಾಡಿಸಲು ವಿಶೇಷ ಸ್ಥಾನಮಾನ ಕಲ್ಪಿಸುವುದು ಅಗತ್ಯವಿದೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಹೋರಾಟ ಹಾಗೂ ರಾಜಕಾರಣಿಗಳ ಇಚ್ಚಾಶಕ್ತಿ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಹೇಳಿದರು.
ಎಸ್.ಎ. ನಿಂಗೋಜಿ ಬಿ.ಇಡ್. ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಹೈ.ಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಾಲ್ಲೂಕಿನ ಮಾಳೆಕೊಪ್ಪ, ಸಿದ್ನೆಕೊಪ್ಪ ಹಾಗೂ ಮುಧೋಳದ ದೇಸಾಯಿ ಮನೆತನಗಳು ವಿಮೋಚನೆಗೆ ವಿಶೇಷ ಕೊಡುಗೆ ನೀಡಿವೆ ಎಂದರು.
ಹಿರಿಯ ಸಾಹಿತಿ ಇತಿಹಾಸ ಸಂಶೋಧಕ ಎಸ್.ಎಚ್. ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯುವಕರು, ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಒಗ್ಗೂಡಿ ಹೋರಾಡದೇ ಈ ಪ್ರದೇಶದ ಅಭಿವೃದ್ಧಿಯ ಯೋಗ ಲಭಿಸದು. ಅನುದಾನ ಕೊಡುವ ಬದಲು ಬೇರೆ ರಾಜ್ಯಗಳ ಅಭಿವೃದ್ಧಿ ಮಾದರಿಯಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಳ್ಳಲು ಜಾಗೃತರಾಗಲು ಕರೆ ನೀಡಿದರು.
ಪದವಿ ಕಾಲೇಜಿನ ಉಪನ್ಯಾಸಕಿ ನಾಗರತ್ನ ತಮ್ಮಿನಾಳ, ಶಿವರಾಜ ಗುರಿಕಾರ ಮಾತನಾಡಿ ಹೋರಾಟವೇ ಜೀವನದ ಕ್ರಮ ಎಂಬಂತೆ ಬದುಕು ಕಟ್ಟಿಕೊಂಡು ಅದೇ ರೂಢಿ ಯಲ್ಲಿ ಕಾಲ ಕಳೆಯುತ್ತಿರುವ ಈ ಪ್ರದೇಶದ ಜನತೆ ಇಂದಿಗೂ ಸಂವಿಧಾನಬದ್ಧ ಹಕ್ಕುಗಳಿಗೆ ಹಾಗೂ ಸ್ಥಾನಮಾನಕ್ಕೆ ಹೋರಾಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ರವಿ ನಿಂಗೋಜಿ, ಸಂಸ್ಥೆಯ ಉಪಾಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿದರು. ಅನೇಕರು ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.