ADVERTISEMENT

ಹೋರಾಟಗಾರರ ಬೆಂಬಲಿಸಲು ಮನವಿ

ಜನಾಂದೋಲನ ಮಹಾಮೈತ್ರಿ ಮುಖಂಡ ನಾಗಲಿಂಗಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಮೇ 2018, 11:27 IST
Last Updated 4 ಮೇ 2018, 11:27 IST

ಲಿಂಗಸುಗೂರು: ‘ಕಾರ್ಮಿಕರ, ಭೂಹೀನರ, ನೊಂದವರ ಧ್ವನಿಯಾಗಿ ಹೋರಾಟ ನಡೆಸುತ್ತಿರುವ ಧಣಿವರಿಯದ ಹೋರಾಟಗಾರ ಆರ್‌. ಮಾನಸಯ್ಯ ಅವರನ್ನು ಬೆಂಬಲಿಸಬೇಕು’ ಎಂದು ಜನಾಂದೋಲನ ಮಹಾಮೈತ್ರಿ ಮುಖಂಡ ಕೆ. ನಾಗಲಿಂಗಸ್ವಾಮಿ ಮನವಿ ಮಾಡಿದರು.

ಕರಡಕಲ್ಲ ಗ್ರಾಮದಲ್ಲಿ ಈಚೆಗೆ ಪಾದಯಾತ್ರೆ ಮೂಲಕ ಮನೆ ಮನೆಗೆ ಭೇಟಿ ನೀಡಿ ಮಾತನಾಡಿದ ಅವರು, ‘ಮೆದಕಿನಾಳ, ಗೆಜ್ಜಲಗಟ್ಟಾ ಭೂ ಹೋರಾಟ ಸೇರಿದಂತೆ ಹತ್ತು ಹಲವು ಹೋರಾಟ ನಡೆಸುತ್ತ ನಾಯಕತ್ವ ಬೆಳೆಸಿಕೊಂಡ ಮಾನಸಯ್ಯ ಅವರ ಗೆಲುವು ಈ ಕ್ಷೇತ್ರದ  ಶೋಷಿತರ, ದಲಿತ ಶಕ್ತಿಯಾಗಿ ಹೊರಹೊಮ್ಮಲಿದೆ’ ಎಂದು ಹೇಳಿದರು.

ಜನಾಂದೋಲನ ಮಹಾಮೈತ್ರಿ ಅಭ್ಯರ್ಥಿ ಆರ್‌.ಮಾನಸಯ್ಯ ಮಾತನಾಡಿ, ‘ಮೂರು ದಶಕಕ್ಕೂ ಹೆಚ್ಚು ವರ್ಷ ಹೋರಾಟದ ಬದುಕು ಕಟ್ಟಿಕೊಂಡು ಬಂದಿರುವೆ. ಸಾಮಾನ್ಯ ಜನರಿಗೆ ನ್ಯಾಯ ಕೊಡಿಸಲು ಹೋಗಿ ಜೈಲುವಾಸ ಅನುಭವಿಸಿರುವೆ. ಜನರು ಆಶೀರ್ವದಿಸಿದಲ್ಲಿ ಕ್ಷೇತ್ರದ ಸಮಗ್ರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವ ಜೊತೆಗೆ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವೆ. ಗುತ್ತಿಗೆ ಆಧಾರಿತ ಕೂಲಿಕಾರರ ಕಾಯಂ, ದಲಿತ, ಅಲ್ಪಸಂಖ್ಯಾತ, ಮಹಿಳೆಯರ ಹಕ್ಕುಗಳ ರಕ್ಷಣೆಗೆ ಹಾಗೂ ಲಂಚ ಮುಕ್ತ ಮತ್ತು ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವುದಾಗಿ’ ಭರವಸೆ ನೀಡಿದರು.

ADVERTISEMENT

ಮುಖಂಡರಾದ ಅಜೀಜ ಜಹಗೀರದಾರ, ಪ್ರಭುಲಿಂಗ ಮೇಗಳಮನಿ, ಖಾಜಾಹುಸೇನ ಫೂಲವಾಲೆ, ತಿಪ್ಪರಾಜ ಗೆಜ್ಜಲಗಟ್ಟಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.