ADVERTISEMENT

‘ಕಾಲೊನಿ ನಿವಾಸಿಗಳ ಎತ್ತಂಗಡಿ ಬೇಡ’

ಎಂಪಿಸಿಎಲ್ ಕಾರ್ಖಾನೆ ಪುನರಾರಂಭಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:09 IST
Last Updated 13 ಡಿಸೆಂಬರ್ 2013, 7:09 IST

ರಾಯಚೂರು: ತಾಲ್ಲೂಕಿನ ಹೆಗ್ಗಸನ­ಹಳ್ಳಿ  ಮೈಸೂರು ಪೆಟ್ರೋ ಕೆಮಿಕಲ್‌ (ಎಂಪಿಸಿಎಲ್) ಕಾರ್ಖಾನೆಯನ್ನು 2013ರ ಜುಲೈ ತಿಂಗಳಲ್ಲಿ ಕಾನೂನು ಬಾಹಿರ­ವಾಗಿ ಮುಚ್ಚಲಾಗಿದ್ದು,  ಕಾರ್ಮಿ­ಕರ ಬೇಡಿಕೆ ಮನವರಿಕೆ ಮಾಡಿಕೊಂಡು ಕಾರ್ಖಾನೆ ಪುನರ್‌ ಆರಂಭಿಸಬೇಕು. ಸಮಸ್ಯೆ ಅಂತಿಮ ಪರಿಹಾರ ಆಗುವವರೆಗೆ ಕಾರ್ಮಿಕ ಕಾಲೊನಿಯಲ್ಲಿ ಈಗಿರುವಂತೆ ಮೂಲ ಸೌಕರ್ಯ ಮುಂದುವರಿಸಬೇಕು ಎಂದು ಮೈಸೂರು ಪೆಟ್ರೋ ಕೆಮಿಕಲ್ಸ್ ನೌಕರರ ಸಂಘವು ಒತ್ತಾಯಿಸಿದೆ.

ಸಂಘದ ನೇತೃತ್ವದಲ್ಲಿ ಅನೇಕ ಕಾರ್ಮಿಕರು ಗುರುವಾರ ರ್‍್ಯಾಲಿ ನಡೆಸಿ, ಕಾರ್ಖಾನೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಎಂಪಿಸಿಎಲ್ ಕಾರ್ಖಾನೆಯನ್ನು ಕಾನೂನು ಬಾಹಿರವಾಗಿ ಈಗಾಗಲೇ ಮುಚ್ಚಲಾಗಿದೆ. ಕಾರ್ಖಾನೆ ಪುನರಾ­ರಂಭಿಸಲು ಹಾಗೂ ಇಲ್ಲದೇ ಇದ್ದರೆ, ಪರಿಹಾರ ನೀಡಬೇಕು. ಕಾರ್ಮಿಕರಿಗೆ ಅಂತಿಮ ಪರಿಹಾರ ಕಲ್ಪಿಸುವವರೆಗೆ ಕಾರ್ಮಿಕ ಕಾಲೊನಿ­ಯಲ್ಲಿ ಈಗಿರುವ ಸೌಕರ್ಯಗಳನ್ನು ಮುಂದುವರಿಸಬೇಕು ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಕಾರ್ಖಾನೆಯ ಆಡಳಿತ ಮಂಡಳಿಗೆ ಪ್ರತಿನಿಧಿಗಳಿಗೆ ತಿಳಿಸಲಾಗಿತ್ತು ಎಂದು ಹೇಳಿದರು.

ಬೆಂಗಳೂರು ಕಾರ್ಮಿಕ ಇಲಾಖೆ ಜಂಟಿ ಆಯುಕ್ತರು ಎರಡು ಬಾರಿ ಜಂಟಿ ಸಂಧಾನ ಸಭೆ ನಡೆಸಿದರೂ ಅಲ್ಲಿಯೂ ಆಡಳಿತ ಮಂಡಳಿಯು ಕಾರ್ಮಿಕರ ಬೇಡಿಕೆಯನ್ನು ನಿರಾಕರಿಸಿದೆ ಎಂದು ತಿಳಿಸಿದರು. ಎಂಪಿಸಿಎಲ್ ಕಾರ್ಮಿಕ ಕಾಲೊನಿ­ಯಿಂದ ಹೊರಗೆ ಇರುವ ಕಾರ್ಮಿಕರ ಪ್ರಕರಣ ಇತ್ಯಾರ್ಥವಾಗುವವರೆಗೆ ಖಾಲಿ ಇರುವ ಕಟ್ಟಡದಲ್ಲಿ ವಾಸಿಸಲು ಹಾಗೂ ಉಳಿದ ಕಾರ್ಮಿಕರಿಗೆ ಖಾಲಿ ಜಾಗದಲ್ಲಿ ಶೆಡ್‌ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕಾರ್ಖಾನೆ  ಜಾಗವನ್ನು ಕಾರ್ಖಾನೆ ಸ್ಥಾಪಿಸಲು ರೈತರಿಂದ ಖರೀದಿಸಿದ್ದು, ಈ ಜಾಗವನ್ನು ಇತರ ಉದ್ದೇಶಕ್ಕೆ ಬಳಸಲು ಸರ್ಕಾರ ಪರವಾನಗಿ ನೀಡಬಾರದು ಎಂದು  ಹೇಳಿದರು. ಈ ಬಗ್ಗೆ ಕಾರ್ಮಿಕರ ಪರವಾಗಿ ಪತ್ರ ಬರೆಯಬೇಕು ಎಂದು ಸಿಐಟಿಯು ಸಂಘಟ­ನೆ­ಯ ಜಿಲ್ಲಾ ಪ್ರಧಾನ ಕಾರ್ಯ­ದರ್ಶಿ ಶೇಕ್ಷಾಖಾದ್ರಿ, ನೌಕರರ ಸಂಘದ ಅಧ್ಯಕ್ಷ ಭೀಮಣ್ಣ, ಕಾರ್ಯದರ್ಶಿ ಅಬ್ದುಲ್‌ನಬೀ ಜಿಲ್ಲಾಧಿಕಾರಿಗೆ ಸಲ್ಲಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷೆ ಎಚ್‌.ಪದ್ಮಾ, ಪದಾಧಿಕಾರಿಗಳಾದ ಡಿ,ಎಸ್‌್ ಶರಣಬಸವ, ಕೆ.ಜಿ ವೀರೇಶ, ಸುರೇಶ ಬಾಬು, ಮರಡಿಸಾಬ್‌, ಬಾಷಾ­ಮಿಯಾ, ಅಮರೇಶ, ಜಿಲಾನಿ ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.