ರಾಯಚೂರು: ಉನ್ನತ ವ್ಯಾಸಂಗಕ್ಕೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿನ ಜ್ಞಾನವೇ ಬುನಾದಿಯಾಗಿದ್ದು, ಈ ವಿಷಯಗಳಲ್ಲಿ ವಿದ್ಯಾರ್ಥಿಗಳು ಪರಿಪೂರ್ಣತೆ ಸಾಧಿಸುವಂತಾಗಬೇಕು . ಮಕ್ಕಳಿಗೆ ಸರಳ ರೀತಿ ಪಠ್ಯ ಅರ್ಥೈಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಗಣಿತ ಮತ್ತು ವಿಜ್ಞಾನ ಶಿಕ್ಷಕರು ಸಮಾಲೋಚನೆ ಆಯೋಜಿಸಿರುವುದು ಉತ್ತಮ ಬೆಳವಣಿಗೆ ಎಂದು ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ ಹೇಳಿದರು.
ಇಲ್ಲಿನ ಪಂಡಿತ ಸಿದ್ದರಾಜ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ರಾಯಚೂರು ಜಿಲ್ಲಾ ಪ್ರೌಢ ಶಾಲಾ ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧಕರ ವೇದಿಕೆ ಆಯೋಜಿಸಿದ್ದ ಜಿಲ್ಲಾ ಮಟ್ಟದ 4ನೇ ಶೈಕ್ಷಣಿಕ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಈ ರೀತಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧಕರ ಸಮಾಲೋಚನೆ ನಡೆಯುತ್ತಿರುವ ಬಗ್ಗೆ ತಿಳಿದಿದೆ. ಈಗ ರಾಯಚೂರು ಜಿಲ್ಲೆಯಲ್ಲಿಯೂ ಗಣಿತ ಮತ್ತು ವಿಜ್ಞಾನ ವಿಷಯ ಬೋಧಕರು ಇಂಥ ಸಮಾಲೋಚನಾ ಸಭೆ ಆಯೋಜಿಸಿರುವುದು ಗಮನಾರ್ಹ. ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು, ಮಕ್ಕಳ ಶೈಕ್ಷಣಿಕ ಏಳ್ಗೆಗೆ ಈ ರೀತಿಯಲ್ಲಿ ಆಯಾ ವಿಷಯದ ಶಿಕ್ಷಕರ ಸಮಾಲೋಚನಾ ಸಭೆ ಬೋಧನೆಗೆ ಮತ್ತು ಮಕ್ಕಳ ಕಲಿಕೆಗೆ ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನೇಯಲು ಮಾತನಾಡಿ, ನಗರದ ಪ್ರದೇಶದ ಶಾಲಾ ಮಕ್ಕಳು ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾರೆ. ಆದರೆ, ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳೂ ಇಂಥ ಸಾಧನೆ ಮಾಡುವಂತಾಗಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಎಲ್ಲ ಶಿಕ್ಷಕರ ವೇದಿಕೆಗಳು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಸಂಗಪ್ಪ ಬಗಲಿ ಎಂಬುವರು ತಮ್ಮ ರಕ್ತದಿಂದ ಬರೆದ ರಾಷ್ಟ್ರ ನಾಯಕರ ಭಾವಚಿತ್ರ ಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ ಶರಣಪ್ಪ ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ, ದಾನಿಗಳಾದ ಕೃಷ್ಣ ಆಕಡೆಮಿ ಅಧ್ಯಕ್ಷ ಎನ್. ಮಧು, ಸರ್ವಜ್ಞ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ, ಶಕ್ತಿನಗರದ ಲಕ್ಷ್ಮಿ ದೇವಪ್ಪ ಜೇಗರಕಲ್ ಅವರನ್ನು ಸನ್ಮಾನ ಮಾಡಲಾಯಿತು. ವಿಷಯ ಪರಿವೀಕ್ಷಕರಾದ ಅರುಣಕುಮಾರ ದೇಸಾಯಿ, ಹೀರಾಬಾಯಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಉಪಾಧ್ಯಕ್ಷ ಮಲ್ಲಯ್ಯ, ನಿಕಟಪೂರ್ವ ಅಧ್ಯಕ್ಷ ಅಶೋಕಕುಮಾರ ಉಪಸ್ಥಿತರಿದ್ದರು.
ಜಿಲ್ಲಾ ಗಣಿತ ಮತ್ತು ವಿಜ್ಞಾನ ಬೋಧಕರ ವೇದಿಕೆಯ ಅಧ್ಯಕ್ಷ ಬಸಪ್ಪ ಗದ್ದಿ ಪ್ರಾಸ್ತಾವಿಕ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.