ರಾಯಚೂರು: ಮಂತ್ರಾಲಯದ ಶ್ರೀ ಗುರುರಾಘವೇಂದ್ರರ ಹಿಂದಿನ ಅವತಾರ ಸರಾಯರದ್ದಾಗಿದ್ದು, ಅವರ ಸಂಕಲ್ಪದಿಂದಲೇ ಈ ಬಾರಿ ರಾಯರ ಸನ್ನಿಧಾನದಲ್ಲಿ ಚಾತುರ್ಮಾಸ್ಯ ವೃತಾಚರಣೆ ಮಾಡಿರುವುದು ಪೂರ್ವಜನ್ಮದ ಪುಣ್ಯದ ಫಲ ಎಂದು ಕುಂದಾಪುರದ ವ್ಯಾಸರಾಯ ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನುಡಿದರು.
ಮಂತ್ರಾಲಯದಲ್ಲಿ ಈಚೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆಯೋಜಿಸಿದ್ದ ಗುರುವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದರು.
ರಾಯರ ಬೃಂದಾವನಕ್ಕೆ ಅಭಿಷೇಕ ಮಾಡಬೇಕೆನ್ನುವ ಮನದಾಸೆ ಈಡೇರಿದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಮುಂದಿನ ದಿನಗಳಲ್ಲಿ ವ್ಯಾಸರಾಯ ಮಠ ಮತ್ತು ರಾಘವೇಂದ್ರಮಠದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಬಾಂಧವ್ಯ ವೃದ್ಧಿಗೆ ನಾಂದಿ ಹಾಡಿರುವ ರಾಯರ ಮಠದ ಗುರುವಂದನೆಗೆ ಆಭಾರಿಯಾಗಿರುವುದಾಗಿ ಹೇಳಿದರು.
ಪಂಡಿತ ಕೇಸರಿ ರಾಜಾ ಗಿರಿರಾಜಾಚಾರ್ಯ ಹಾಗೂ ಸುಯಮೀಂದ್ರಾಚಾರ್ ಅವರು ಶ್ರೀಗಳಿಗೆ ಮುತ್ತಿನ ಹಾಗೂ ನಾಣ್ಯಗಳಿಂದ ತುಲಾಭಾರ ನಡೆಸಿದರು. ವ್ಯಾಸರಾಯಮಠದ ಆರಾಧ್ಯದೈವ ಗೋಪಾಲಕೃಷ್ಣನಿಗೆ ಸ್ವರ್ಣದ ಮಾಲೆ ಇದೇ ಸಂದರ್ಭದಲ್ಲಿ ನೀಡಲಾಯಿತು.
ಪ್ರಶಸ್ತಿ ಪ್ರದಾನ: ಜೀವಮಾನದ ಸಾಧನೆಗೆ ಕೊಡಮಾಡುವ ಶ್ರೀ ಧೀರ ವೇಣುಗೋಪಾಲ ಪ್ರಶಸ್ತಿಯನ್ನು ಮರಣೋತ್ತರವಾಗಿ ಲಕುಮೀಶ ದಾಸರಿಗೆ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಜಗೋಪಾಲಾಚಾರ್ಯ ಉಡುಪಿ (ದ್ವೈತ ವೇದಾಂತ), ವಿದ್ವಾನ್ ಗೋಪಾಲ ಶರ್ಮ ವನಪರ್ತಿ (ವೇದ, ಸಂಸ್ಕೃತ), ಡಾ.ರಾಮರಾವ್ ಉದ್ನೂರ ತಳಕಲ್ (ಸಮಾಜ ಸೇವೆ), ಪ್ರಸನ್ನ ಕರ್ಪುರ ಹುಬ್ಬಳ್ಳಿ (ಮಾಧ್ಯಮ), ಸುಶೀಲೇಂದ್ರ ಕುಲಕರ್ಣಿ ಪಾಲ್ಘಾಟ್ (ಕಲೆ, ಸಂಸ್ಕೃತಿ) ಚಾರ್ತುಮಾಸ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸುಯಮೀಂದ್ರಾಚಾರ,ಡಿ.ಎನ್. ವಾದಿರಾಜಾಚಾರ್. ಡಾ. ಪಂಚಮುಖಿ, ಪಂ.ನಾಗಸಂಪಿಗೆ ಹಾಗೂ ಮಠದ ಸಿಬ್ಬಂದಿ ವರ್ಗ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.