ADVERTISEMENT

‘1,000 ಕುಡಿಯುವ ನೀರಿನ ಘಟಕ ಸ್ಥಾಪನೆ’

ಭೂ ಸೇನಾ ನಿಗಮಕ್ಕೆ ಕಾಮಗಾರಿ ಹೊಣೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 6:22 IST
Last Updated 5 ಡಿಸೆಂಬರ್ 2013, 6:22 IST

ರಾಯಚೂರು: ಜಿಲ್ಲೆಯಲ್ಲಿ 1,000 ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯ ಸರ್ಕಾರವು ಭೂ ಸೇನಾ ನಿಗಮಕ್ಕೆ ಈ ಕಾಮಗಾರಿ ವಹಿಸಿಕೊಟ್ಟಿದೆ. ಈ ಕಾಮಗಾರಿ ಬೇಗ ಪೂರ್ಣಗೊಳಿಸುವ ಭರವಸೆ ಇದೆ ಎಂದು ಜಿಲ್ಲಾ ಪಂಚಾ­ಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮುದ್ದುಮೋಹನ್ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಆರ್ಸೆನಿಕ್, ಫ್ಲೋರೈಡ್‌­ಯುಕ್ತ ನೀರು ಹೊಂದಿರುವಂಥ ಗ್ರಾಮ­ಗಳಲ್ಲಿ ಈಗಾಗಲೇ 40 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ  ಸ್ಥಾಪನೆ ಮಾಡಲಾಗಿದೆ. ರೂ 2 ಕ್ಕೆ 20 ಲೀಟರ್ ನೀರು ಪಡೆಯುತ್ತಿದ್ದಾರೆ. ಬಹುತೇಕ ಘಟಕಗಳು ಕಾರ್ಯ ನಿರ್ವ­ಹಿಸುತ್ತವೆ. ಎಲ್ಲಿ ಕಾರ್ಯ­ನಿರ್ವ­ಹಿಸು­ತ್ತಿಲ್ಲ ಎಂಬುದರ ಬಗ್ಗೆ ದೂರುಗಳು ಬಂದಿಲ್ಲ. ಬಂದರೆ ತುರ್ತಾಗಿ ಸರಿಪಡಿಸ­ಲಾಗುತ್ತದೆ ಎಂದು ಹೇಳಿದರು.

ಉದ್ಯೋಗ ಖಾತರಿ ಯೋಜನೆ ಸಾಧನೆ: ರಾಯಚೂರು ಜಿಲ್ಲೆಯಲ್ಲಿ 2013–14ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜ­ನೆ­ಯಡಿ 2, 43,­517 ಲಕ್ಷ ಕುಟುಂಬಗಳಿಗೆ ಉದ್ಯೋಗ ಚೀಟಿ ಕೊಡ­ಲಾಗಿದೆ.  13 ಲಕ್ಷ ಉದ್ಯೋಗ ಮಾನವ ದಿನ ಸೃಜಿಸಲಾಗಿದೆ. ಒಟ್ಟು ರೂ70.36 ಕೋಟಿ ಅನು­ದಾನ ಲಭ್ಯ­ವಿತ್ತು. ಇದರಲ್ಲಿ ರೂ 57.61 ಕೋಟಿ ಕಾಮ­ಗಾರಿಗೆ ವಿನಿಯೋಗಿ-­ಸಲಾ­ಗಿದೆ ಎಂದು ಹೇಳಿದರು.

2013–14ರಲ್ಲಿ ಯೋಜನೆಯಡಿ ಬಾಕಿ ಇರುವ ಮೊತ್ತ ರೂ 2.60 ಕೋಟಿ ಇದೆ. 2012–13ರಲ್ಲಿನ ಪಾವತಿಗೆ ಬಾಕಿ ಇರುವ ಮೊತ್ತ ರೂ 6.81 ಕೋಟಿ ಇದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಗ್ರಾಮ ಸಭೆ, ವಾರ್ಡ್‌ ಸಭೆ ನಡೆಸಿ ಕಾಮಗಾರಿ ಕೈಗೊಳ್ಳ­ಲಾಗಿದೆ.  ನಮ್ಮ ಹೊಲ ನಮ್ಮ ದಾರಿ ಕಾರ್ಯಕ್ರಮವನ್ನು ಗ್ರಾಮೀಣ ಸರ್ವ ಋತು ಸಂಪರ್ಕ ಕಾರ್ಯಕ್ರಮದಡಿ  ಈಗಾಗಲೇ 12 ಕಾಮಗಾರಿ ಆರಂಭಿಸ­ಲಾಗಿದೆ. ತೋಟಗಾರಿಕೆ, ಜಲಾನಯನ ಇತ್ಯಾದಿ ಕಾಮಗಾರಿಗಳನ್ನು ಎಸ್‌ಸಿ­ಎಸ್‌ಟಿ, ಸಣ್ಣ, ಅತೀ ಸಣ್ಣ ರೈತರಿಗೆ ಹಾಗೂ ಇತರ ಅರ್ಹ ವ್ಯಕ್ತಿಗಳ ಫಲಾ­ನುಭವಿಗಳ ಜಮೀನುಗಳಲ್ಲಿ ಒಟ್ಟು 436 ಕಾಮಗಾರಿ ಕೈಗೊಳ್ಳ­ಲಾಗಿದೆ ಎಂದರು.

ಉದ್ಯೋಗ ಖಾತರಿ ಯೋಜ­ನೆ­ಯಡಿ ಜಿ.ಪಂ ವ್ಯಾಪ್ತಿಗೆ ಬರುವ 260  ಕೆರೆಗಳಲ್ಲಿ ಒಟ್ಟು 101 ಕೆರೆಗಳ ಪುನಶ್ಚೇ­ತನಕ್ಕೆ ಕ್ರಮ ಕೈಗೊಳ್ಳ­ಲಾಗಿದೆ. ಇದರಲ್ಲಿ 9 ಕಾಮಗಾರಿಗಳು ಈಗ ವಿವಿಧ ಹಂತದಲ್ಲಿವೆ.  ಸಣ್ಣ ನೀರಾವರಿ ಕೆರೆಗಳ ಪುನಶ್ಚೇತನಕ್ಕೆ ಈ ವರ್ಷದಲ್ಲಿ 35 ಕಾಮಗಾರಿ ತೆಗೆದುಕೊಳ್ಳಲಾ­ಗುತ್ತದೆ. ಅರಣ್ಯ, ತೋಟಗಾರಿಕೆ ಇಲಾಖೆಗೆ ಸಂಬಂಧಿಸಿ­ದಂತೆ ಜಿಲ್ಲೆಯಲ್ಲಿ ಒಟ್ಟು 1,434 ಕಾಮಗಾರಿಗಳನ್ನು ಆರಂಭಿಸಲಾ­ಗಿದೆ.

ಅದೇ ರೀತಿ 135 ಆಟದ ಮೈದಾನ ಕಾಮಗಾರಿ ಆಯ್ಕೆ ಮಾಡಿದ್ದು, ಇದರಲ್ಲಿ 9 ಕಾಮಗಾರಿ ಆರಂಭಿಸ­ಲಾಗಿದೆ ಎಂದು ಹೇಳಿದರು.

5 ಕೋಟಿ ಬಾಕಿ: ಜಿಲ್ಲೆಯ ಮಾನ್ವಿ ಮತ್ತು ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚು ಪಾವತಿಗೆ ಬಾಕಿ ಹಣ ಉಳಿದಿದೆ. ಬ್ಯಾಂಕ್‌ ಖಾತೆ ಹೊಂದಿರದೇ ಇದ್ದುದ್ದೇ ಇದಕ್ಕೆ ಕಾರಣವಾಗಿದೆ. ಹೀಗಾಗಿ ಬ್ಯಾಂಕ್ ಖಾತೆಯುಳ್ಳವರಿಗೆ ಮಾತ್ರ ಹಣ ಪಾವತಿ ಮಾಡಲಾಗುವುದು. ಈ ಬಗ್ಗೆ ಸಂಬಂಧಪಟ್ಟವರಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಎಸ್‌ಸಿಎಸ್‌ಟಿ ಕುಟುಂ­ಬ­ಗಳ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕಾಗಿ ರೂ 15 ಸಾವಿರ ಪ್ರೋತ್ಸಾಹಧನ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಈ ಯೋಜನೆ­ಯಡಿ ಎಲ್ಲ ಬಿಪಿಎಲ್‌ ಮತ್ತು ನಿರ್ಬಂ­ಧಿತ ಎಪಿಎಲ್ ವೈಯಕ್ತಿಕ ಶೌಚಾ­ಲಯ ನಿರ್ಮಾಣಕ್ಕೆ ಪ್ರೋತ್ಸಾಹ ಧನ ಪಡೆಯಲು ಅರ್ಹರಾಗಿರುತ್ತಾರೆ ಎಂದು ವಿವರಿಸಿದರು.

ಇಬ್ಬರು ಪಿಡಿಒ ವಿರುದ್ಧ ಕ್ರಮ: ಪಲಕನಮರಡಿ ಗ್ರಾಮ ಪಂಚಾಯಿತಿ­ಯಲ್ಲಿ ವಸತಿ ಯೋಜನೆಯಡಿ ಹಣ ದುರ್ಬಳಕೆ ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಪತ್ತೆಪ್ಪ ರಾಠೋಡ, ಶಿವಣ್ಣ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಯೋಜನಾಧಿಕಾರಿ ಶರಣಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.