ಮಸ್ಕಿ: ತಾಲ್ಲೂಕಿನ ವೆಂಕಟಾಪುರ ಗ್ರಾಮದ ಉಪ್ಪಿಹಳ್ಳದ ಸರ್ವೆ ನಂ. 14 ರಲ್ಲಿ ಕ್ರಿ.ಶ. 17-18 ಶತಮಾನದ ಪ್ರಾಚೀನ ಶಾಸನಗಳು ಡಾ. ಚನ್ನಬಸ್ಸಪ್ಪ ವಲ್ಕಂದಿನ್ನಿ ಅವರು ನಡೆಸುತ್ತಿರುವ ಸಂಶೋಧನೆ ವೇಳೆಯಲ್ಲಿ ಬೆಳಕಿಗೆ ಬಂದಿವೆ.
ಈ ಶಾಸನಗಳ ಮೇಲೆ ಸೂರ್ಯ, ಈಶ್ವರ ಲಿಂಗು, ಚಂದ್ರ ಗೀರಿದ ಶಿಲ್ಪಗಳು ಇವೆ. ಇವುಗಳ ಕೆಳ ಭಾಗದಲ್ಲಿ ಕನ್ನಡ ಲಿಪಿಯಲ್ಲಿ ‘ಕರಸ್ಥಲ ದೇವರು’ ಬಗ್ಗೆ ಉಲ್ಲೇಖ ಇದೆ.
ವೆಂಕಟಾಪುರ ಗ್ರಾಮದ ಜಂಗಮರಿಗೆ ಸಾಮಂತ ಅರಸರು ಇಲ್ಲಿನ ದೇವಾಲಯದ ಪೂಜೆಗಾಗಿ ಈ ಹೊಲವನ್ನು ದತ್ತಿಯಾಗಿ ಕೊಟ್ಟು ಅದರ ಮೇರೆಯನ್ನು ಗುರುತಿಸುವುದಕ್ಕೆ ನಾಲ್ಕು ಮೂಲೆಗಳಲ್ಲಿ ಲಿಂಗಮುದ್ರೆಯ ಕಲ್ಲು ಹಾಕಿಸುವುದು ವಾಡಿಕೆಯಾಗಿತ್ತು ಎಂದು ಡಾ. ಚನ್ನಬಸ್ಸಪ್ಪ ವಲ್ಕಂದಿನ್ನಿ ತಿಳಿಸಿದ್ದಾರೆ.
ಪತ್ತೆಯಾದ ಕರಸ್ಥಲ ದೇವರು ಎಂಬ ಪದ ಕ್ರಿ.ಶ 12ನೇ ಶತಮಾನದ ವಚನಕಾರ ನಾಗಿದೇವನ ವಚನಾಂಕಿತ ಪದವಾಗಿದೆ ಎಂದು ಅವರು ತಿಳಿಸಿದರು.
ಕಲ್ಲಿನಲ್ಲಿ ಕೆತ್ತಿದ ಮೊದಲ ಅಂಕಿತನಾಮ ಇದಾಗಿದ್ದರಿಂದ ಇದು ಬಹಳ ಮಹತ್ವ ಪಡೆದುಕೊಂಡಿದೆ ಎಂದರು.
ಗ್ರಾಮದಲ್ಲಿ ಎರಡು ವೀರಗಲ್ಲುಗಳು, ಮೂರು ಮಾರುತಿ ದೇವಾಲಯ, ದುರ್ಗಾದೇವಿ, ಸುಂಕ್ಲಮ್ಮ, ಬಸವೇಶ್ವರ ದೇವಾಲಯ ಜೊತೆಗೆ ಏಳು ನಂದಿ, ಮೂರು ಈಶ್ವರ ಲಿಂಗು, ಎರಡು ಗಣೇಶ ವಿಗ್ರಹಗಳು, ಹಲವು ನಾಗ ಶಿಲೆಗಳು, ರಾಮ ಲಕ್ಷ್ಮಣ, ಸೇತೆ, ವೆಂಕಟೇಶ್ವರ ವಿಗ್ರಹಗಳು ಇರುವುದು ಗ್ರಾಮದ ಮತ್ತೊಂದು ವಿಶೇಷ ಎಂದು ಅವರು ವಿಶ್ಲೇಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.