ADVERTISEMENT

371ನೇ ಕಲಂ ತಿದ್ದುಪಡಿ: ಭಿನ್ನಾಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 10:50 IST
Last Updated 21 ಜನವರಿ 2012, 10:50 IST

ಸಿಂಧನೂರು: ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371ನೇ ಕಲಂ ತಿದ್ದುಪಡಿ ಜಾರಿಗೆ ಒತ್ತಾಯಿಸಿ ಜ. 24ರಂದು ಹೈ.ಕ. ಬಂದ್ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಶಾಸಕ ವೆಂಕಟರಾವ್ ನಾಡಗೌಡರ ಕಾರ್ಯಾಲಯದಲ್ಲಿ ಹೈ.ಕ. ಜನಾಂದೋಲನ ಸಮಿತಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ಭಿನ್ನಾಭಿಪ್ರಾಯ ಬಯಲಾಯಿತು.

ಮೊದಲು ಮಾತನಾಡಿದ ಶಾಸಕ ಹಂಪನಗೌಡ ಬಾದರ್ಲಿ ತಿದ್ದುಪಡಿಗೆ ಸಂಬಂಧಿಸಿದ ಪ್ರಸ್ತಾವನೆ ಕ್ಯಾಬಿನೆಟ್‌ಗೆ ಬಂದು ಲೋಕಸಭೆಯಲ್ಲಿ ಚರ್ಚೆಯಾಗುವ ಕಾಲ ಸನ್ನಿಹಿತವಾಗಿದೆ. ಸಮಿತಿಯವರು ಯಾವುದೇ ನಿರ್ಧಾರ ಕೈಗೊಂಡರೂ ತಮ್ಮ ಪಕ್ಷದಿಂದ ಸಂಪೂರ್ಣ ಬೆಂಬಲ ಇದೆ ಎಂದಾಗ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಇನ್ನೂ ಕ್ಯಾಬಿನೆಟ್‌ಗೆ ನೋಟ್ ಬಂದೇ ಇಲ್ಲ ಎಂದರು. ತಾವು ಅದನ್ನೇ ಹೇಳುತ್ತಿದ್ದೇನೆ ಎಂದು ಹಂಪನಗೌಡ ಮರು ಪ್ರತಿಕ್ರಿಯಿಸಿದರು. ನಂತರ ವೈಯಕ್ತಿಕಕಾರ್ಯ ನಿಮಿತ್ತ ತಾವು ಹೋಗುವುದಾಗಿ ಸಭೆಗೆ ತಿಳಿಸಿ ಹೊರ ನಡೆದರು.

ನಂತರ ಮಾತನಾಡಿದ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಆಗಸ್ಟ್ ತಿಂಗಳಿನಲ್ಲಿ ದೆಹಲಿಯಲ್ಲಿ ಹೋರಾಟ ಮಾಡಿದ ಸಂದರ್ಭದಲ್ಲಿ ಕೇಂದ್ರ ಸಚಿವ ಖರ್ಗೆ ಇನ್ನೂ ಕ್ಯಾಬಿನೆಟ್‌ಗೆ ನೋಟ್ ಬರಬೇಕಾಗಿದೆ. ನೋಟ್ ಬಂದ ನಂತರ ಚರ್ಚೆ ಮಾಡುವುದಾಗಿ ಹೇಳಿದ್ದರು. ಕ್ಯಾಬಿನೆಟ್‌ಗೆ ನೋಟ್ ಬರಬೇಕೆಂದರೆ ಅದಕ್ಕೆಷ್ಟು ಕಾಲಬೇಕು.

ಈಗಲೂ ಹಂಪನಗೌಡರು ಅದನ್ನೇ ಹೇಳುತ್ತಿದ್ದಾರೆ ಎಂದು ಏರಿದ ದನಿಯಲ್ಲಿ ವಿರೂಪಾಕ್ಷಪ್ಪ ಪ್ರಶ್ನಿಸಿದರು. ಹೈ.ಕ. ಅಭಿವೃದ್ಧಿಗೆ ಪಕ್ಷಾತೀತವಾಗಿ ಹೋರಾಟ ನಡೆಯಬೇಕಾಗಿದೆ. ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ದಕ್ಷಿಣ ಕರ್ನಾಟಕದವರೇ ತುಂಬಿಕೊಂಡಿದ್ದಾರೆ.

ಈ ಭಾಗದ ವೀರೇಂದ್ರ ಪಾಟೀಲ್, ಧರ್ಮಸಿಂಗ್  ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಇದಕ್ಕೆ ದಕ್ಷಿಣ ಕರ್ನಾಟಕದವರು ಬಿಗಿ ಹಿಡಿತ ಹೊಂದಿರುವುದೇ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಂಪನಗೌಡ ಮತ್ತು ವಿರೂಪಾಕ್ಷಪ್ಪ ಅವರ ಭಿನ್ನ ಅನಿಸಿಕೆಗಳನ್ನು ಕೇಳಿದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಸಿ ಮುಸಿ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.