ADVERTISEMENT

5 ಸಾವಿರ ಮನೆ ಮಂಜೂರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:15 IST
Last Updated 9 ಅಕ್ಟೋಬರ್ 2012, 9:15 IST

ದೇವದುರ್ಗ: ಪುರಸಭೆಯ 23 ವಾರ್ಡ್‌ಗಳಲ್ಲಿನ ಸುಮಾರು 2500 ಜನ ಫಲಾನುಭವಿಗಳನ್ನು ಮೊದಲ ಹಂತದಲ್ಲಿ ವಾಜಪೇಯಿ ನಗರ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಗೊಂಡಿದ್ದು, ಕೂಡಲೇ ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಾಸಕ ಕೆ. ಶಿವನಗೌಡ ನಾಯಕ ಕರೆ ನೀಡಿದರು.

ಸೋಮವಾರ ಪಟ್ಟಣದ ದರ್ಬಾರ ಹತ್ತಿರ ಇರುವ ಈಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಆಯ್ಕೆಯಾದ ಫಲನುಭವಿಗಳಿಗೆ ಮಂಜೂರಾತಿ ಪತ್ರ ಮತ್ತು ಕಾಮಗಾರಿ ಆದೇಶವನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಆಯ್ಕೆಗೊಂಡ ಪ್ರತಿ ಫಲಾನುಭವಿಗಳಿಗೆ ಮೊದಲ ಹಂತದಲ್ಲಿ 15ಸಾವಿರ ರೂಪಾಯಿ, ಎರಡನೇ ಹಂತದಲ್ಲಿ 20ಸಾವಿರ ರೂಪಾಯಿ ಮೂರನೇ ಹಂತದಲ್ಲಿ 20 ಸಾವಿರ ರೂಪಾಯಿ ಮತ್ತು ಕೊನೆಯ ಹಂತದಲ್ಲಿ 20 ಸಾವಿರ ರೂಪಾಯಿ ಒಟ್ಟು 75 ಸಾವಿರ ರೂಪಾಯಿಯನ್ನು ನೀಡಲಾಗುವುದು, ಬರುವ ಎರಡು ತಿಂಗಳಲ್ಲಿ ಕಾಮಗಾರಿ ಮುಗಿಸಬೇಕು ಎಂದರು.

ಈಗಾಗಲೇ ಮೊದಲ ಹಂತದಲ್ಲಿ 2500 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದು, ಎರಡನೇ ಹಂತದಲ್ಲಿ 2500 ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಫಲಾನುಭವಿಗಳಿಂದ ಸಂಬಂಧಿಸಿದ ದಾಖಲಾತಿ ಪೂರ್ಣಗೊಂಡ ನಂತರ ಅವರಿಗೂ ಆದೇಶ ಪತ್ರ ನೀಡಲಾಗುವುದು ಎಂದ ಅವರು, ಪುರಸಭೆಯ ವ್ಯಾಪ್ತಿಯ ಒಟ್ಟು ಜನರಿಗೆ 5ಸಾವಿರ ಮನೆಗಳನ್ನು ನೀಡಲಾಗಿದೆ ಎಂದರು.

ಮನೆಗಳನ್ನು ನಿರ್ಮಿಸಿಕೊಳ್ಳದೆ ಹಣ ಎತ್ತಿಹಾಕಲು ಯತ್ನಿಸಬಾರದು ಎಂದು ಎಚ್ಚರಿಕೆ ನೀಡಿದ ಅವರು ಯಾರೊಬ್ಬರಿಗೂ ಲಂಚದ ರೂಪದಲ್ಲಿ ಹಣವನ್ನು ನೀಡಬಾರದು ಎಂದು ಹೇಳುವುದು ಮರೆಯಲಿಲ್ಲ.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ತಾಯಮ್ಮ ಚಂದಪ್ಪ ಅಕ್ಕರಿಕಿ, ತಾಪಂ ಅಧ್ಯಕ್ಷ ಪ್ರಭಯ್ಯಸ್ವಾಮಿ, ಬಿಜೆಪಿ ಅಧ್ಯಕ್ಷ ಸಿ.ಎಸ್. ಪಾಟೀಲ, ಮುಖಂಡರಾದ ಶಾಮರಾವ್ ಕುಲಕರ್ಣಿ, ದೇವೀಂದ್ರಪ್ಪಗೌಡ ಹಂಚಿನಾಳ, ಜಿಪಂ ಸದಸ್ಯ ಪ್ರಕಾಶ ಪಾಟೀಲ, ತಾಪಂ ಸದಸ್ಯ ಬಸವರಾಜ ನಾಯಕ, ರಂಗಪ್ಪ ಗೋಸಲ, ಬುವಾಜಿ ಗೌರಂಪೇಟೆ, ನಾಗಪ್ಪ ನಾಡದಾಳ, ಸಿದ್ದಯ್ಯಸ್ವಾಮಿ ಮುಖ್ಯಾಧಿಕಾರಿ ಶ್ರೀಪಾದ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.