ADVERTISEMENT

ಡಿಪಿಆರ್ ಸಿದ್ಧಪಡಿಸಲು ಕೃಷ್ಣಾ ಭಾಗ್ಯ ಜಲ ನಿಗಮಕ್ಕೆ ಸೂಚನೆ

ನಾರಾಯಣಪೂರ 5 (ಎ) ಕಾಲುವೆ ಯೋಜನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 16:12 IST
Last Updated 6 ಜೂನ್ 2023, 16:12 IST

ಮಸ್ಕಿ: ಚುನಾವಣೆ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದ ನಾರಾಯಣಪೂರ ಬಲದಂಡೆ ಕಾಲುವೆಯ ಪಾಮನಕೆಲ್ಲೂರು 5 (ಎ) ಕಾಲುವೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸುವಂತೆ ಕೃಷ್ಣ ಭಾಗ್ಯ ಜಲ ನಿಗಮದ ತಾಂತ್ರಿಕ ನಿರ್ದೇಶಕರು ನಿಗಮದ ಮುಖ್ಯ ಎಂಜಿನಿಯರ್ ಅವರಿಗೆ ಮಂಗಳವಾರ ಪತ್ರ ಬರೆದು ಆದೇಶಿಸಿದ್ದಾರೆ.

ಸ್ಥಳೀಯ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರ ಮನವಿ ಹಾಗೂ ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನಿರ್ದೇಶನದ ಮೇರೆಗೆ ಯೋಜನೆಯ ಸಮಗ್ರ ಯೋಜನಾ ವರದಿ ಹಾಗೂ ಶಿಫಾರಸ್ಸಿನೊಂದಿಗೆ ಮುಂಜೂರಾತಿಗಾಗಿ ಶೀಘ್ರ ಸಲ್ಲಿಸುವಂತೆ ಅವರು ಬರೆದ ಪತ್ರದಲ್ಲಿ ಆದೇಶಿಸಿದ್ದಾರೆ.

ಮಸ್ಕಿ ಕ್ಷೇತ್ರದ ಉಪ ಚುನಾವಣೆ ಹಾಗೂ ಈಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ನಾರಾಯಣಪೂರ ಬಲದಂಡೆಯ 5 (ಎ) ಕಾಲುವೆ ಚುನಾವಣೆ ವಿಷಯವಾಗಿ ಪರಿಣಮಿಸಿತ್ತು.

ADVERTISEMENT

ಹಿಂದಿನ ಬಿಜೆಪಿ ಸರ್ಕಾರ 5 (ಎ) ಕಾಲುವೆ ಜಾರಿ ಅಸಾಧ್ಯ ಎಂದು ಇಲಾಖೆ ಎಂಜಿನಿಯರ್‌ಗಳು ಸರ್ಕಾರಕ್ಕೆ ವರದಿ ನೀಡಿದ್ದರಿಂದ ವಟಗಲ್ ಬಸವೇಶ್ವರ ಏತ ಹರಿ ನೀರಾವರಿ ಯೋಜನೆಯ ಜಾರಿಗೆ ಮುಂಜೂರಾತಿ ನೀಡಿತ್ತು.

ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಟಗಲ್ ಬಸವೇಶ್ವರ ಏತ ಹರಿ ನೀರಾವರಿ ಯೋಜನೆ ಬದಲು 5 (ಎ) ಕಾಲುವೆ ಜಾರಿ ಮಾಡುವುದಾಗಿ ಇಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಡಿ. ಕೆ. ಶಿವಕುಮಾರ ಈ ಭಾಗದ ಜನರಿಗೆ ಭರವಸೆ ನೀಡಿದ್ದರು.

ಇದೀಗ ಕೃಷ್ಣಾ ಭಾಗ್ಯ ಜಲ ನಿಗಮವು ಮಂಗಳವಾರ ಡಿಪಿಆರ್ ಸಿದ್ದಪಡಿಸಲು ಮುಖ್ಯ ಎಂಜಿನಿಯರ್ ಅವರಿಗೆ ಸೂಚಿಸುವ ಮೂಲಕ ಯೋಜನೆ ಜಾರಿಗೆ ಮುಂದಾಗಿದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.