ADVERTISEMENT

ತೊಗರಿ ಖರೀದಿ ಕೇಂದ್ರ ಆರಂಭ

ದಾಖಲೆ ಸಲ್ಲಿಸಲು ಸರದಿಯಲ್ಲಿ ನಿಲ್ಲುತ್ತಿರುವ ರೈತರು

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 7:27 IST
Last Updated 4 ಜನವರಿ 2018, 7:27 IST
ಕವಿತಾಳದ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ದಾಖಲೆ ಸಲ್ಲಿಸಲು ರೈತರು ಬುಧವಾರ ಸರದಿಯಲ್ಲಿ ನಿಂತಿರುವುದು
ಕವಿತಾಳದ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ದಾಖಲೆ ಸಲ್ಲಿಸಲು ರೈತರು ಬುಧವಾರ ಸರದಿಯಲ್ಲಿ ನಿಂತಿರುವುದು   

ಕವಿತಾಳ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಹೆಸರು ನೋಂದಣಿ ಮಾಡಲು ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ರೈತರು ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಎದುರು ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಈಚೆಗೆ ಪಟ್ಟಣದಲ್ಲಿ ಆರಂಭವಾದ ಖರೀದಿ ಕೇಂದ್ರದ ವ್ಯಾಪ್ತಿಗೆ ಕವಿತಾಳ, ಪಾಮನಕಲ್ಲೂರು, ಮಲ್ಲಟ, ಹೀರಾ ಮತ್ತು ಹಾಲಾಪುರ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಗಳನ್ನು ಸೇರಿಸಲಾಗಿದೆ.

ಪಹಣಿ, ಆಧಾರ್‌ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಬ್ಯಾಂಕ್‌ ಪಾಸ್‌ಬುಕ್‌ ಸೇರಿದಂತೆ ಇತರ ದಾಖಲೆಗಳನ್ನು ನೀಡಿ ರೈತರು ಹೆಸರು ನೋಂದಣಿ ಮಾಡುತ್ತಿದ್ದಾರೆ. ಕವಿತಾಳ ಹೋಬಳಿಯ 20 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂದಾಜು 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ತೊಗರಿ ಬಿತ್ತೆನೆ ಮಾಡಿದ್ದಾರೆ.

ADVERTISEMENT

ಪಾಮನಕಲ್ಲೂರು ಹೋಬಳಿಯ 20 ಹಳ್ಳಿಗಳಲ್ಲಿ ಅಂದಾಜು 2 ಸಾವಿರ, ಮಲ್ಲಟ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 3.5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತೆನೆಯಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯ ಕೊನೆ ಭಾಗದ ಹರ್ವಾಪುರ, ಆನಂದಗಲ್‌ ಸೇರಿದಂತೆ ವಿವಿಧ ಹಳ್ಳಿಗಳ ರೈತರು 25–30 ಕಿ.ಮೀ ದೂರದಿಂದ ಕವಿತಾಳ ಖರೀದಿ ಕೇಂದ್ರಕ್ಕೆ ಬರುವಂತಾಗಿದೆ. ಹೀಗಾಗಿ ಪಾಮನಕಲ್ಲೂರು ಗ್ರಾಮದಲ್ಲಿ ಪ್ರತೇಕ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಪಾಟೀಲ ವಟಗಲ್‌ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.