ADVERTISEMENT

ಸಿಂಧನೂರು: ಶಾಶ್ವತ ಪರಿಹಾರಕ್ಕೆ ಕ್ರಮ; ಮುಖ್ಯ ಎಂಜಿನಿಯರ್ ರಾಜಗೋಪಾಲ ಪರಿಶೀಲನೆ

ಸಿಂಧನೂರು ನಗರದ ದೊಡ್ಡ ಕೆರೆ ಏರಿಯಲ್ಲಿ ಬಿರುಕು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 6:09 IST
Last Updated 1 ಡಿಸೆಂಬರ್ 2021, 6:09 IST
ಸಿಂಧನೂರಿನ ದೊಡ್ಡ ಕೆರೆ ಏರಿ ಬಿರುಕು ಬಿಟ್ಟಿರುವುದನ್ನು ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಮುಖ್ಯ ಎಂಜಿನಿಯರ್ ರಾಜಗೋಪಾಲ ಪರಿಶೀಲಿಸಿದರು
ಸಿಂಧನೂರಿನ ದೊಡ್ಡ ಕೆರೆ ಏರಿ ಬಿರುಕು ಬಿಟ್ಟಿರುವುದನ್ನು ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಮುಖ್ಯ ಎಂಜಿನಿಯರ್ ರಾಜಗೋಪಾಲ ಪರಿಶೀಲಿಸಿದರು   

ಸಿಂಧನೂರು: ಇಲ್ಲಿನ ಕುಷ್ಟಗಿ ರಸ್ತೆಯಲ್ಲಿರುವ ಕುಡಿಯುವ ನೀರಿನ ದೊಡ್ಡ ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ಶಾಸಕ ವೆಂಕಟರಾವ್ ನಾಡಗೌಡ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್ ರಾಜಗೋಪಾಲ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ,‘ಕೆರೆ ಏರಿಯಲ್ಲಿ ಬಿರುಕು ಕಾಣಿಸಿಕೊಂಡ ಕುರಿತು ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ತುರ್ತಾಗಿ ಕಾಮಗಾರಿ ಆರಂಭಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಾಶ್ವತವಾಗಿ ಕೆರೆ ಕುಸಿಯದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಬೆಂಗಳೂರಿಗೆ ತೆರಳಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಅನುದಾನ ಹೊಂದಾಣಿಕೆ ಕುರಿತಂತೆ ಸಚಿವರೊಂದಿಗೆ ಚರ್ಚಿಸುತ್ತೇನೆ. ಒಂದು ತಿಂಗಳ ಅವಧಿಯಲ್ಲಿ ದುರಸ್ತಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ಮುಖ್ಯ ಎಂಜಿನಿಯರ್ ರಾಜಗೋಪಾಲ ಮಾತನಾಡಿ,‘ಈ ಹಿಂದೆ ಕೆರೆ ಕುಸಿದಿತ್ತು. ದುರಸ್ತಿ ಮಾಡಲಾಗಿತ್ತು. ಸಮರ್ಪಕವಾಗಿ ದುರಸ್ತಿ ಮಾಡದ ಕಾರಣ ಮತ್ತೆ ಕುಸಿದಿದೆ. ಈಗ ಗುಣಮಟ್ಟದ ಕೆಲಸ ಮಾಡಿ, ದುರಸ್ತಿ ಮಾಡಲಾಗುವುದು. ತಜ್ಞರನ್ನು ಕರೆಯಿಸಿ ಪರಿಶೀಲನೆ ನಡೆಸಿ, ವರದಿ ಪಡೆಯಲಾಗುವುದು. ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ,‘ದುರಸ್ತಿ ಕಾರ್ಯ ನಡೆಯುವುದರಿಂದ ಎರಡು ದಿನ ತಡವಾಗಿ ಆಯಾ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡಲಾಗುವುದು’ ಎಂದು ಹೇಳಿದರು. ಉಪಾಧ್ಯಕ್ಷ ಮುರ್ತುಜಾ ಹುಸೇನ್, ಸದಸ್ಯರಾದ ಡಿ.ಸತ್ಯನಾರಾಯಣ, ಶೇಖರಪ್ಪ ಗಿಣಿವಾರ, ಚಂದ್ರಶೇಖರ ಮೈಲಾರ್, ಕೆ.ಹನುಮೇಶ, ಜಿಲಾನಿಪಾಷಾ, ಹೆಚ್.ಬಾಷಾ, ಮುನೀರ್‌ ಪಾಷಾ, ನಗರಸಭೆ ಮಾಜಿ ಸದಸ್ಯ ಪ್ರಭುರಾಜ್, ಚಂದ್ರಶೇಖರ ಮೇಟಿ, ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.