ರಾಯಚೂರು: ಫ್ರೆಂಡ್ಸ್ ವೈಲ್ಡ್ ಲೈಫ್ ಸೊಸೈಟಿ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ನಗರದ ಮಲಿಯಾಬಾದ್ ಅರಣ್ಯ ಪ್ರದೇಶದಲ್ಲಿ 65 ಹಾವುಗಳನ್ನು ಮರಳಿ ಸುರಕ್ಷಿತವಾಗಿ ಕಾಡಿಗೆ ಬಿಡುವ ಕಾರ್ಯಕ್ರಮ ಈಚೆಗೆ ನಡೆಯಿತು.
ಉರಗತಜ್ಞ ಅಫ್ಸರ್ ಹುಸೇನ್ ಮಾತನಾಡಿ, ಹಾವುಗಳು ಕಂಡಾಗ ಕೊಲ್ಲದೇ ಉರಗತಜ್ಞರಿಗೆ ಮಾಹಿತಿ ನೀಡಬೇಕು. ಅವುಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗುವುದು. ಹಾವುಗಳ ಸಂತತಿ ಕಾಪಾಡಲು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸ್ನೇಕ್ ಪಾರ್ಕ್ (ಹಾವಿನ ಉದ್ಯಾನ) ಮಾಡುವ ಉದ್ದೇಶ ಹೊಂದಿದ್ದೇವೆ. ಇದರಿಂದ ಶಾಲಾ ಕಾಲೇಜಿನ ಮಕ್ಕಳಿಗೆ ಮಾಹಿ ನೀಡಿ ಜಾಗೃತಿ ಮೂಡಿಸಬಹುದು. ಇದಕ್ಕೆ ಜನಪ್ರತಿನಿಧಿಗಳು, ಸಮಾಜಸೇವಕರು ಸಹಕರಿಸಿ ಬೆಂಬಲ ನೀಡಬೇಕು ಎಂದು ಹೇಳಿದರು.
ಕೆಪಿಸಿಸಿ ಮಹಿಳಾ ಘಟಕದರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ನಾಯಕ ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವವರಿದ್ದಾರೆ ಎನ್ನುವ ಮಾಹಿತಿ ತಿಳಿದು ಹೆಮ್ಮೆ ಆಯಿತು. ಈ ಕಾರ್ಯಕ್ಕೆ ಕಾಂಗ್ರೆಸ್ ಮಹಿಳಾ ಘಟಕದಿಂದ ಬೆಂಬಲ ನೀಡಲಾಗುವುದು. ಉರಗ ಪ್ರೇಮಿ ಅಪ್ಸರ್ ಅವರ ಮೊಬೈಲ್ ಸಂಖ್ಯೆಯನ್ನು ಜನರು ಇಟ್ಟುಕೊಂಡಿರುವುದು ಒಳ್ಳೆಯದು. ಹಾವು ಕಂಡುಬಂದಾಗ ಆಪತ್ಕಾಲದಲ್ಲಿ ಅವರಿಂದ ನೆರವು ಪಡೆದುಕೊಳ್ಳಬಹುದು. ಸೊಷಿಯಲ್ ಮಿಡಿಯಾದಲ್ಲಿ ಈ ಬಗ್ಗೆ ಹಂಚಿಕೊಳ್ಳುತ್ತೇನೆ ಎಂದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ಬೆಣ್ಣೆ, ಶಶಿಕಲಾ ಭೀಮರಾಯ, ಡಾ.ಲಿಯಾಖತ್ ಬೇಗಂ, ಮಾಲಾ ಭಜ್ರಂತಿ, ಜ್ಯೋತಿ ಚೌಹಾಣ್, ಯಂಕಪ್ಪ, ಪ್ರತಿಭಾ ರೆಡ್ಡಿ, ಛಾಯಚಿತ್ರಗ್ರಾಹಕ ಪ್ರವೀಣ, ನರೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.