ADVERTISEMENT

ಗ್ರಾಮೀಣ ಕ್ರೀಡಾಕೂಟಗಳಿಗೆ ಪ್ರೋತ್ಸಾಹ ಅಗತ್ಯ: ಚನ್ನಬಸವ

​ಪ್ರಜಾವಾಣಿ ವಾರ್ತೆ
Published 14 ಮೇ 2022, 15:36 IST
Last Updated 14 ಮೇ 2022, 15:36 IST
ರಾಯಚೂರು ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯಿಂದ ನೇತಾಜಿ ಜಯಂತಿ ನಿಮಿತ್ತ ಶನಿವಾರ ಏರ್ಪಡಿಸಿದ್ದ ಪಂಚಾಯಿತಿ ಮಟ್ಟದ ಗ್ರಾಮೀಣ ಕ್ರೀಡಾಕೂಟದ ಸಮಾರೋಪದಲ್ಲಿ ಚನ್ನಬಸವ ಜಾನೇಕಲ್‌ ಮಾತನಾಡಿದರು.
ರಾಯಚೂರು ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯಿಂದ ನೇತಾಜಿ ಜಯಂತಿ ನಿಮಿತ್ತ ಶನಿವಾರ ಏರ್ಪಡಿಸಿದ್ದ ಪಂಚಾಯಿತಿ ಮಟ್ಟದ ಗ್ರಾಮೀಣ ಕ್ರೀಡಾಕೂಟದ ಸಮಾರೋಪದಲ್ಲಿ ಚನ್ನಬಸವ ಜಾನೇಕಲ್‌ ಮಾತನಾಡಿದರು.   

ರಾಯಚೂರು: ಇಂದಿನ ದಿನಗಳಲ್ಲಿ ಗ್ರಾಮೀಣ ಯುವಕರನ್ನು ಒಂದುಗೂಡಿಸುವ ಕಲೆ, ಕ್ರೀಡೆಗಳು ಹೆಚ್ಚಾಗಿ ನಡೆಯುತ್ತಿಲ್ಲ. ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್ ತಿಳಿಸಿದರು.

ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಜಿಲ್ಲಾ ಸಮಿತಿಯಿಂದ ಶನಿವಾರ ಏರ್ಪಡಿಸಿದ್ದ ಪಂಚಾಯಿತಿ ಮಟ್ಟದ ಗ್ರಾಮೀಣ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದರು.

ಗ್ರಾಮೀಣ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಅವಶ್ಯಕತೆ ಇದೆ. ಕ್ರೀಡಾಕೂಟಗ ಆಯೋಜನೆ ಶ್ಲಾಘನೀಯ.ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಜಿರಹಿತವಾಗಿ ಹೋರಾಡಿ ಬಲಿದಾನ ಮಾಡಿದ ಮಹಾನ್ ನೇತಾಜಿ ನಮ್ಮ ಯುವಕರಿಗೆ ಆದರ್ಶವಾಗಬೇಕಾಗಿದೆ. ಐಸಿಎಸ್ ಪರೀಕ್ಷೆಯನ್ನು ಪಾಸುಮಾಡಿ ಬ್ರಿಟೀಷರ ಗುಲಾಮ ಅಧಿಕಾರಿಯಾಗದೆ ಜನರ ವಿಮೋಚನೆಗಾಗಿ ಹೋರಾಡಿದರು. ಅಂತಹ ನಾಯಕರ ಜೀವನ ಹೋರಾಟವನ್ನು ಅರಿತುಕೊಳ್ಳಬೇಕು. ಅವರ ಕನಸಿನ ಭಾರತವನ್ನು ಕಟ್ಟಲು ಯುವಕರು ಮುಂದೆ ಬರಬೇಕು ಎಂದರು.

ADVERTISEMENT

ಬಹುಮಾನ ವಿತರಣೆ: ಮಮದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳ 50ಕ್ಕೂ ಹೆಚ್ಚಿನ ಯುವಕರು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಕೈಕಲ್ಲು ಎತ್ತುವ ಸ್ಪರ್ಧೆಯಲ್ಲಿ 80ಕೆಜಿ ಕಲ್ಲು ಎತ್ತಿದ ಮಹಾದೇವ ಬಸ್ಸಪ್ಪ ಪ್ರಥಮ ಬಹುಮಾನ , 75ಕೆ.ಜಿ ಎತ್ತಿದ ಶಿವಾನಂದ ದ್ವಿತೀಯ ಬಹುಮಾನ ಹಾಗೂ 70ಕೆ.ಜಿ ಎತ್ತಿದ ರಾಜು ಸೋಮರೆಡ್ಡಿ ತೃತೀಯ ಬಹುಮಾನ ಪಡೆದರು.

ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಆಶಾಪುರದ ನರಸಪ್ಪ 120ಕೆ.ಜಿ ಉಸುಕಿನ ಚೀಲ ಎತ್ತಿ ಪ್ರಥಮ ಸ್ಥಾನ ಪಡೆದರು. ಮಹೇಶ 110 ಕೆ.ಜಿ ದ್ವಿತೀಯ ಸ್ಥಾನ ಹಾಗೂ ಶಿವಾನಂದ ತೃತೀಯ ಸ್ಥಾನ ಪಡೆದರು.

ಗುಂಡು ಎಸೆತ ಸ್ಪರ್ಧೆಯಲ್ಲಿ ಮಹೇಶ್ ಬಸ್ಸಪ್ಪ ಪ್ರಥಮ ಸ್ಥಾನ,ಈರೇಶ್ ಯಾದವ್ ಎರಡನೇ, ಮುನಿಸ್ವಾಮಿ ಮೂರನೇ ಸ್ಥಾನ ಪಡೆದು ಬಹುಮಾನ ಪಡೆದರು. ಮೂರು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಬೆಳ್ಳಿ ಪದಕ ಹಾಗೂ ಉಳಿದ ವಿಜೇತರಿಗೆ ಕಪ್ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.

ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಬಾಳ್, ಮುಖಂಡ ಮಹಾದೇವಪ್ಪಗೌಡ, ವೀರನಗೌಡ ಮಾಲಿ ಪಾಟೀಲ್, ಲಿಂಗಯ್ಯ, ಮಲ್ಲಿಕಾರ್ಜುನ ಗೌಡ, ಗಂಗಣ್ಣ ನಾಯಕ, ಗೋಕರಪ್ಪ ನಾಯಕ, ಮಲ್ಲಪ್ಪ ಬಾಗಿಲಿ, ಗ್ರಾಮ ಪಂಚಾಯಿತಿ ಸದಸ್ಯ ಮಾರ್ಕ್, ದೇವರಾಜ್, ಈರಣ್ಣ, ತಮಟೆ ಹನುಮಂತ, ರಾಘವೇಂದ್ರ ಆಶಾಪುರ, ಸುಗ್ರೀವ, ಜಂಬಣ್ಣ, ಉಮೇಶ, ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ವಿನೋದ ಕುಮಾರ, ಕೃಷ್ಣ ಮನಸಲಾಪೂರ, ಜಾಫರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.