ADVERTISEMENT

ರಾಯಚೂರು | ಯುವ ನಿಧಿ ಯೋಜನೆ: 10 ಸಾವಿರ ಅರ್ಜಿ; 5,006 ನಿರುದ್ಯೋಗಿಗಳಿಗೆ ಭತ್ಯೆ 

ಚಂದ್ರಕಾಂತ ಮಸಾನಿ
Published 30 ಆಗಸ್ಟ್ 2024, 5:04 IST
Last Updated 30 ಆಗಸ್ಟ್ 2024, 5:04 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಚೂರು: ಕೌಶಲಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಯುವನಿಧಿ ಯೋಜನೆಗೆ ಚಾಲನೆ ನೀಡಿದ ನಂತರ ಜಿಲ್ಲೆಯಿಂದ 10 ಸಾವಿರ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಸರಿಯಾದ ದಾಖಲೆ ಒದಗಿಸಿರುವ 5006 ಯುವಕರು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.

ಯುವನಿಧಿ ಯೋಜನೆಯು 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಅನ್ವಯವಾಗಲಿದೆ. ಯುವನಿಧಿ ಯೋಜನೆ ಮೂಲಕ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹ 3 ಸಾವಿರ ಹಾಗೂ ಡಿಪ್ಲೊಮ ಪಾಸಾಗಿರುವ ನಿರುದ್ಯೋಗಿಗಳಿಗೆ ತಿಂಗಳಿಗೆ ₹ 1500 ದೊರೆಯಲಿದೆ. ನಿರುದ್ಯೋಗ ಭತ್ಯೆ ಎರಡು ವರ್ಷಗಳ ಅವಧಿಗೆ ಮಾತ್ರ ದೊರೆಯಲಿದೆ.

ADVERTISEMENT

ಫಲಾನುಭವಿಗಳಿಗೆ ಉದ್ಯೋಗ ಲಭಿಸಿದರೆ ನಿರುದ್ಯೋಗ ಭತ್ಯೆ ತಕ್ಷಣವೇ ಸ್ಥಗಿತಗೊಳ್ಳಲಿದೆ. ಈ ಯೋಜನೆಯು ಕರ್ನಾಟಕ ರಾಜ್ಯದ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗಲಿರುವ ಹಿನ್ನೆಯಲ್ಲಿ ಜಿಲ್ಲೆಯ 10 ಸಾವಿರ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ್ದರು. ಉದ್ಯೋಗ ವಿನಯಮ ಇಲಾಖೆಯ ಅಧಿಕಾರಿಗಳ ದಾಖಲೆಗಳ ಪರಿಶೀಲನೆ ಮಾಡಿ ಅರ್ಜಿ ಸಲ್ಲಿಸಿದ ಅರ್ಧದಷ್ಟು ಯುವಕರಿಗೆ ನಿರುದ್ಯೋಗ ಭತ್ಯೆ ದೊರೆಯುವಂತೆ ಮಾಡಿದ್ದಾರೆ.

ರಾಯಚೂರು ಜಿಲ್ಲೆಯ 4978 ಪದವಿಧರರು ಹಾಗೂ 28 ಡಿಪ್ಲೊಮಾ ಪೂರ್ಣಗೊಳಿಸಿದವರು ನಿರುದ್ಯೋಗ ಭತ್ಯೆಯನ್ನು ಪಡೆಯಲಾರಂಭಿಸಿದ್ದಾರೆ. ಅರ್ಜಿ ಸಲ್ಲಿಸಿ ಆಯ್ಕೆಯಾದವರಿಗೆ ಯುವನಿಧಿ ಯೋಜನೆ ಹಣವನ್ನು ಡಿಬಿಟಿ ಮೂಲಕ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂದು ಉದ್ಯೋಗ ವಿನಯಮ ಕಚೇರಿಯ ಅಧಿಕಾರಿ ನವಿನ್‌ಕುಮಾರ ಹೇಳಿದ್ದಾರೆ.

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರು ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ನಡೆಸಬೇಕು. ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಾವು ನಿರುದ್ಯೋಗಿಗಳೆಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳ ಜೊತೆಗೆ ತಾವು ಉತ್ತರಿಸಿದ ದಿನಾಂಕದಿಂದ 6 ತಿಂಗಳ ತಮ್ಮ ಅಧಿಕೃತ ಬ್ಯಾಂಕ್ ಖಾತೆಯ ವಹಿವಾಟು ಸ್ಟೇಟ್‌ಮೆಂಟ್ ಪ್ರತಿಯನ್ನು ಸಲ್ಲಿಸಬೇಕು. ಒಂದು ವೇಳೆ ಬ್ಯಾಂಕ್‌ಗೆ ಪ್ರತಿ ಸಲ್ಲಿಸದಿದ್ದರೆ ಅರ್ಜಿ ತಿರಸ್ಕಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.