ರಾಯಚೂರು: ಸೇವಾ ಜೇಷ್ಠತೆ ಮೇಲೆ ವೇತನ ನಿಗದಿ ಪಡಿಸಲು ಮತ್ತು ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹಾಗೂ ಮರಣ ಹೊಂದಿದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಜಿಲ್ಲಾ ಘಟಕದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
2016 ರಿಂದ ಇದುವರೆಗೂ ರಾಯಚೂರು ಜಿಲ್ಲೆಯಲ್ಲಿ ನಿವೃತ್ತಿಯಾದ 52 ಜನರಿಗೆ ನಿವೃತ್ತಿ ವೇತನ ಸೌಲಭ್ಯ ಮತ್ತು ಸುಮಾರು 29 ಜನರಿಗೆ ಮರಣ ಪರಿಹಾರ ಬಿಡುಗಡೆ ಮಾಡಬೇಕು. 2015 ರಿಂದ ಆಯ್ಕೆಯಾಗಿರುವ ಹೊಸ ಅಂಗನವಾಡಿ ಕಾರ್ಯಕತೆ ಮತ್ತು ಸಹಾಯಕರಿಯರಿಗೆ ಎಲ್ಐಸಿ ಆಧಾರಿತ ನಿವೃತ್ತಿ ಸೌಲಭ್ಯವನ್ನು ಶಿಫಾರಸು ಮಾಡಲಾಗಿತ್ತು. ಆದರೆ ಬಜೆಟ್ನಲ್ಲಿ ಈ ಯಾವ ಶಿಫಾರಸುಗಳನ್ನು ಜಾರಿ ಮಾಡಿಲ್ಲ. ಈ ಬಗ್ಗೆ ತಮ್ಮನ್ನು ಭೇಟಿ ಮಾಡಿದ್ದರೂ ಸಹ ಇದುವರೆಗೂ ನೌಕರರ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ ಎಂದು ತಿಳಿಸಿದರು.
ಕೋವಿಡ್ ತಡೆಗಟ್ಟಲು ಮತ್ತು ರಾಜ್ಯದಲ್ಲಿ ಗರ್ಭಿಣಿ - ಬಾಣಂತಿ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ, ಮನೆ ಮನೆ ಸಮೀಕ್ಷೆ, ಕೋವಿಡ್ ರೋಗಿಗಳ ಮನೆಗೆ ಭೇಟಿ, ಸಂತ್ರಸ್ತರನ್ನು ನೋಡಿಕೊಳ್ಳುವುದು, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ.
ಕೋವಿಡ್ ಮೊದಲೆನೇ ಅಲೆಯಲ್ಲಿ 25 ಅಂಗನವಾಡಿ ನೌಕರರು ಸಾವನ್ನಪ್ಪಿದ್ದು ₹30 ಲಕ್ಷ ಪರಿಹಾರ ನೀಡಬೇಕು. ಎರಡನೇ ಅಲೆಯಲ್ಲಿ ಕರೋನಾ ವಾರಿಯರ್ಸ್ ಗಳಾಗಿ ಕೆಲಸ ಮಾಡುವ ಎಲ್ಲರಿಗೂ ಕೊರೋನಾ ವಾರಿಯರ್ಸ್ ಎಂದು ನೇಮಕ ಮಾಡಿರುವ ವೈಯಕ್ತಿಕ ನೇಮಕ ಪತ್ರ ನೀಡಲು ನಗರ ಸಭೆ ಮತ್ತು ಪಿಡಿಒಗಳಿಗೆ ನಿರ್ದೇಶನ ನೀಡಬೇಕು ಎಂದು ಹೇಳಿದರು.
ಆಹಾರ ಧಾನ್ಯಗಳ ಹಂಚಿಕೆಗೆ ವಿಶೇಷ ಸಾರಿಗೆ ಭತ್ಯೆ ಕೊಡಬೇಕು. ಮಾಸ್ಕ್ ಮತ್ತು ಸ್ಯಾನಿಟೈಸರ್ ಮತ್ತು ಮುಖಗವಸು, ಗ್ಲೌಸ್ ಕೊಡಬೇಕು. ಅನುಕಂಪದ ಆಧಾರದಲ್ಲಿ ಕೆಲಸದಲ್ಲಿದ್ದು ನಿಧನರಾದ ಅಂಗನವಾಡಿ ನೌಕರರ ಕುಟುಂಬ ಸದಸ್ಯರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷೆ ಎಚ್.ಪದ್ಮಾ, ರಂಗಮ್ಮ ಅನ್ವರ್, ಗೋಕಾರಮ್ಮ ಪ್ರಭಾವತಿ, ಗಂಗಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.