ರಾಯಚೂರು: ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರಿಗೆ ಮತ್ತು ಬಿಸಿಯೂಟ ನೌಕರರಿಗೆ ಕಾಲಮಿತಿಯೊಳಗೆ ಲಸಿಕೆ ನೀಡಬೇಕು. ಅಗತ್ಯ ಸುರಕ್ಷಾ ಸಾಧನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕೋವಿಡ್ ನಿಯಂತ್ರಿಸಲು ಮುಂಚೂಣಿಯಲ್ಲಿರುವ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರಿಗೆ ಕೊವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿ ಸೋಂಕಿನಿಂದ ರಕ್ಷಿಸಬೇಕು. ಜಿಡಿಪಿಯ ಶೇ 6 ರಷ್ಟು ಹಣವನ್ನು ಆರೋಗ್ಯ ಇಲಾಖೆಗೆ ಮೀಸಲಿಟ್ಟು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು ಎಂದರು.
ಆಮ್ಲಜನಕ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ನೀಡಬೇಕು. ಹೆಚ್ಚುವರಿಯಾಗಿ ಮಾಸಿಕ ₹10 ಸಾವಿರ ಕೋವಿಡ್ ಭತ್ಯೆ ನೀಡಬೇಕು.ಕೋವಿಡ್ ಸೋಂಕಿತರಾಗಿದ್ದ ಕಾರ್ಯಕರ್ತೆಯರಿಗೆ ಕನಿಷ್ಠ ₹10 ಲಕ್ಷ ಪರಿಹಾರ ನೀಡಬೇಕು. ಕಾರ್ಮಿಕ ವಿರೋಧಿ ಸಂಹಿತೆಗಳನ್ನು ವಾಪಸ್ಸು ಪಡೆಯಬೇಕು. ಯೋಜನೆಗಳ ಕೆಲಸಗಾರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಕಾಯಂಗೊಳಿಸಬೇಕು. ಬಜೆಟ್ನಲ್ಲಿ ಅನುದಾನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷೆ ಎಚ್.ಪದ್ಮಾ, ಈರಮ್ಮ, ನಾಗಮ್ಮ, ಪಾರ್ವತಿ, ಸಿ. ಮಹೇಶ, ಡಿ.ಎಸ್. ಶರಣಬಸವ, ಗಂಗಮ್ಮ, ಕೆ.ಜಿ.ವೀರೇಶ, ಎನ್. ಎಸ್ ವೀರೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.