ರಾಯಚೂರು: ರೈತರು ತಾವು ಬೆಳೆದ ಬೆಳೆಗಳನ್ನು ಆ್ಯಪ್ ಮೂಲಕ ಅಪ್ಲೋಡ್ ಮಾಡಿ ಸಲ್ಲಿಸಬಹುದಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಆ್ಯಪ್ ಸಿದ್ಧಪಡಿಸಲಾಗಿದೆ. ಬೆಳೆ ಸಮೀಕ್ಷೆಗೆ ಇದರಿಂದ ಅನುಕೂಲವಾಗಿದೆ ಎಂದು ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಹೇಶ ಹೇಳಿದರು.
ತಾಲ್ಲೂಕಿನ ಯಾಪಲದಿನ್ನಿ ಹೋಬಳಿಯ ಅಪ್ಪನದೊಡ್ಡಿ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ 2020-12 ಸಾಲಿನ ರೈತರಿಂದ ಬೆಳೆ ಸಮೀಕ್ಷೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳೆ ಸಮೀಕ್ಷೆಗೆ ಮಾಹಿತಿ ಅಪ್ಲೋಡ್ ಮಾಡುವುದಕ್ಕೆ ಆಗಸ್ಟ್ 24 ಕೊನೆಯ ದಿನಾಂಕ. ರೈತರಿಗೆ ಆ್ಯಪ್ ಮೂಲಕ ಬೆಳೆ ಸಮೀಕ್ಷೆ ಮಾಹಿತಿ ಅಳವಡಿಸಲು ತೊಂದರೆಯಾದಲ್ಲಿ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಈ ಬೆಳೆ ಸಮೀಕ್ಷೆ ರೈತರಿಗೆ ಅನುಕೂಲವಾಗಿದ್ದು, ಮುಂದೆ ಇಲಾಖೆಯಿಂದ ದೊರೆಯುವ ಪರಿಹಾರ ವಿಮೆಗಳಿಗೆ ಸಹಾಯಕ ಆಗುತ್ತದೆ ಎಂದು ತಿಳಿಸಿದರು.
ಯಾಪಲದಿನ್ನಿ ಭಾಗದಲ್ಲಿ ಮೊಸಂಬಿ, ಮಾವು ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆದಿರುವ ರೈತರು ಬೆಳೆ ಸಮೀಕ್ಷೆಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಯೋಜನ ಪಡೆದರು.
ರೈತರಿಗೆ ಮೊಬೈಲ್ ಮೂಲಕ ಸಮೀಕ್ಷೆ ಮಾಡುವ ವಿಧಾನವನ್ನು ತೋಟಗಾರಿಕಾ ಅಧಿಕಾರಿ ವೆಂಕಟೇಶ ಮನವರಿಕೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.