ADVERTISEMENT

ಮಾನ್ವಿ: ಆಸ್ಪತ್ರೆಗೆ ತಜ್ಞರು, ಸಿಬ್ಬಂದಿ ನೇಮಕಕ್ಕೆ ಕ್ರಮ

₹11ಕೋಟಿ ವೆಚ್ಚದ ತಾಯಿ–ಮಕ್ಕಳ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 15:59 IST
Last Updated 11 ಜನವರಿ 2022, 15:59 IST
ಮಾನ್ವಿಯಲ್ಲಿ ಮಂಗಳವಾರ ನೂತನ ತಾಯಿ-ಮಕ್ಕಳ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು
ಮಾನ್ವಿಯಲ್ಲಿ ಮಂಗಳವಾರ ನೂತನ ತಾಯಿ-ಮಕ್ಕಳ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮಾತನಾಡಿದರು   

ಮಾನ್ವಿ: ‘ಪಟ್ಟಣದ ನೂತನ ತಾಯಿ-ಮಕ್ಕಳ ಆಸ್ಪತ್ರೆಗೆ ಅಗತ್ಯವಿರುವ ತಜ್ಞ ವೈದ್ಯರು, ಇತರ ಸಿಬ್ಬಂದಿ ನೇಮಕ ಹಾಗೂ ವೈದ್ಯಕೀಯ ಸಲಕರಣೆಗಳ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಮಂಗಳವಾರ ಪಟ್ಟಣದಲ್ಲಿ ₹11 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 60 ಹಾಸಿಗೆಗಳ ನೂತನ ತಾಯಿ-ಮಕ್ಕಳ ಆಸ್ಪತ್ರೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಹೊಸದಾಗಿ ನೇಮಕಾತಿಯಾದ 1,790 ವೈದ್ಯರ ಪೈಕಿ ರಾಯಚೂರು ಜಿಲ್ಲೆಗೆ 46 ವೈದ್ಯರನ್ನು ನೇಮಿಸಲಾಗಿದೆ. ಮಾನ್ವಿ ಪಟ್ಟಣದ ತಾಯಿ- ಮಕ್ಕಳ ಆಸ್ಪತೆಗೆ ಈಗಾಗಲೇ ಶೇ 40ರಷ್ಟು ಸಿಬ್ಬಂದಿ ನೇಮಕ ಮಾಡಲಾಗಿದ್ದು, ಶೀಘ್ರವೇ ಉಳಿದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲದ್ಲು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ, ಕ್ಷೇತ್ರದ ಅಭಿವೃದ್ಧಿ ನನ್ನ ಮೊದಲ ಆದ್ಯತೆ’ ಎಂದರು.

ನಂತರ ಪಟ್ಟಣದಲ್ಲಿ 2017-18ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಲ್ಲಿ ನಿರ್ಮಾಣವಾದ ಟೌನ್‌ಹಾಲ್, ಒಳಕ್ರೀಡಾಂಗಣಗಳನ್ನು ಉದ್ಘಾಟಿಸಲಾಯಿತು.

ರಾಯಚೂರು ಸಂಸದ ರಾಜಾಅಮರೇಶ್ವರ ನಾಯಕ, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಪುರಸಭೆಯ ಅಧ್ಯಕ್ಷೆ ರಶೀದಾ ಬೇಗಂ, ಪುರಸಭೆಯ ವಿಪಕ್ಷ ನಾಯಕ ರಾಜಾ ಮಹೇಂದ್ರ ನಾಯಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶನಾಯಕ ಬೆಟ್ಟದೂರು, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್, ಜಿಪಂ ಸಿಇಒ ನೂರ್ ಜಹಾನ್ ಖಾನಂ, ಡಿಎಚ್‌ಒ ರಾಮಕೃಷ್ಣ, ಟಿಎಚ್‌ಒ ಚಂದ್ರಶೇಖರಯ್ಯ ಸ್ವಾಮಿ, ಮುಖ್ಯ ವೈದ್ಯಾಧಿಕಾರಿ ಮಲ್ಲನಗೌಡ ಪಾಟೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.