ADVERTISEMENT

ಅಶೋಕ ಗಸ್ತಿ ಅವರ ಪಾರ್ಥಿವ ಶರೀರ ದರ್ಶನಕ್ಕೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:04 IST
Last Updated 18 ಸೆಪ್ಟೆಂಬರ್ 2020, 6:04 IST
ಅಶೋಕ ಗಸ್ತಿ ಅವರ ಭಾವಚಿತ್ರವನ್ನಿಟ್ಟು ಅಭಿಮಾನಿಗಳು, ಹಿತೈಷಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಅಶೋಕ ಗಸ್ತಿ ಅವರ ಭಾವಚಿತ್ರವನ್ನಿಟ್ಟು ಅಭಿಮಾನಿಗಳು, ಹಿತೈಷಿಗಳು ಶ್ರದ್ಧಾಂಜಲಿ ಸಲ್ಲಿಸಿದರು.   
""
""

ರಾಯಚೂರು: ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಾಯಚೂರಿಗೆ ತರಲಾಗುತ್ತಿದ್ದು, ಅವರ ಅಂತಿಮ ದರ್ಶನ ಪಡೆಯಲು ನಗರದ ಆರ್‌ಟಿಒ ವೃತ್ತದಲ್ಲಿ ಜನರು ಮುಗಿಬಿದ್ದು ಕಾಯುತ್ತಿದ್ದಾರೆ.

ಪೊಲೀಸ್‌ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ವಾಹನ ಸಂಚರಿಸುವ ಕಡೆಗಳಲ್ಲಿ ಜನದಟ್ಟಣೆ ಆಗದಂತೆ ನಿಯಂತ್ರಣ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪಾರ್ಥಿವ ಶರೀರದ ಹತ್ತಿರ ಹೋಗುವುದಕ್ಕೆ ಸಾರ್ವಜನಿಕರಿಗೆ ಆವಕಾಶ ಇರುವುದಿಲ್ಲ. ಹೂಗುಚ್ಛಗಳನ್ನು ಹಿಡಿದು ನಿಂತಿರುವವರು ಆ್ಯಂಬುಲೆನ್ಸ್‌ ಹತ್ತಿರ ಹೋಗುವುದಕ್ಕೆ ಪ್ರಯತ್ನ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡುತ್ತಿದ್ದಾರೆ.

ಶ್ರದ್ಧಾಂಜಲಿ: ರಾಯಚೂರಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಆರ್‌ಟಿಒ ವೃತ್ತ ಸೇರಿದಂತೆ ವಿವಿಧ ಕಡೆಗಳಲ್ಲಿ ಅಶೋಕ ಗಸ್ತಿ ಅವರ ಭಾವಚಿತ್ರವನ್ನು ಅಳವಡಿಸಿ ಅಭಿಮಾನಿಗಳು, ಹಿತೈಷಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ADVERTISEMENT

ಶಾಸಕ ಡಾ. ಶಿವರಾಜ ಪಾಟೀಲ ಹಾಗೂ ಬಿಜೆಪಿ ಮುಖಂಡರು ಆರ್‌ಟಿಒ ವೃತ್ತದಲ್ಲಿ ಅಳವಡಿಸಿದ್ದ ಭಾವಚಿತ್ರದ ಎದುರು ಮೌನಾಚರಣೆ ಮಾಡಿ ಆತ್ಮಕ್ಕೆ ಶಾಂತಿ ಕೋರಿದರು.

'ರಾಜ್ಯಸಭಾ ಸದಸ್ಯರಾದ ಅಶೋಕ ಗಸ್ತಿ ಅವರು ಬಹಳ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು. ಪಕ್ಷವು ಅವರ ಕೆಲಸವನ್ನು ಗುರುತಿಸಿ ಈ ಸ್ಥಾನ ನೀಡಿತ್ತು. ಕೋವಿಡ್‌ನಿಂದ ಅವರು ಮೃತಪಟ್ಟಿರುವುದರಿಂದ ರಾಯಚೂರು ತಬ್ಬಲಿ ಆದಂತಾಗಿದೆ' ಎಂದು ಶಾಸಕ ಡಾ.ಶಿವರಾಜ ಪಾಟೀಲ ಹೇಳಿದರು.

ಅಂತ್ಯಕ್ರಿಯೆ ತಯಾರಿ: ಕೋವಿಡ್‌ನಿಂದ ಮೃತಪಟ್ಟಿರುವ ಅಶೋಕ ಗಸ್ತಿ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಮರ್ಯಾದೆಯೊಂದಿಗೆ ನೆರವೇರಿಸಲು ಜಿಲ್ಲಾಡಳಿತವು ತಯಾರಿ ಮಾಡಿಕೊಂಡಿದೆ. ರಾಯಚೂರು ನಗರ ಹೊರವಲಯ ಪೋತಗಲ್‌ ಬಳಿ ಸರ್ಕಾರಿ ಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.