ಸಿಂಧನೂರು: ಭಕ್ತರ ಇಷ್ಟಾರ್ಥ ಈಡೇರಿಸುವ ಕಾಮಧೇನು ಸಿದ್ಧಪರ್ವತವಾಸಿ ಬಗಳಾಮುಖಿ ದೇವಾಲಯವು ಉತ್ತರ ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದು.
ಸಿಂಧನೂರು ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರವಿರುವ ಅಂಬಾಮಠದ ಸಿದ್ಧಪರ್ವತದಲ್ಲಿ 250 ವರ್ಷಗಳ ಹಿಂದೆ ಚಿದಾನಂದ ಅವಧೂತರು ಉಪಾಸನ ಮಾಡಿ ಶ್ರೀದೇವಿಯನ್ನು ಸಾಕ್ಷ್ಯಾತ್ಕಾರ ಮಾಡಿಕೊಂಡು, ಶ್ರೀಚಕ್ರದಲ್ಲಿ ಆಹ್ವಾನಿಸಿದ ಕ್ಷೇತ್ರ ಇದಾಗಿದೆ. ಇಲ್ಲಿ ಅನೇಕ ಋಷಿ ಮುನಿಗಳು ತಪಸ್ಸು ಮಾಡಿದ್ದಾರೆಂಬು ನಂಬಲಾಗಿದೆ. ಶ್ರೀದೇವಿಯ ಹತ್ತು ರೂಪಗಳಲ್ಲಿ ಬಗಳಾ ಎನ್ನುವ ರೂಪ ಒಂದಾಗಿರುವುದರಿಂದ ‘ಬಗಳಾಮುಖಿ’ ಎಂದೇ ಖ್ಯಾತಿ ಹೊಂದಿದೆ.
ಜೊತೆಗೆ ಪಾರ್ವತಿಯ ರೂಪವಾಗಿರುವ ‘ಶಕ್ತಿದೇವತೆ’ ಎಂಬ ಹೆಸರು ಸಹ ಇದೆ. ಚಿದಾನಂದ ಅವಧೂತರು ಪುರಾಣ ಬರೆದ 18 ಅಧ್ಯಾಯಗಳಿದ್ದು, ಅವುಗಳನ್ನು ಇಂದಿಗೂ ದಸರಾದ ನವರಾತ್ರಿ ಸಂದರ್ಭದಲ್ಲಿ 9 ದಿನಗಳ ಕಾಲ ಶ್ರೀದೇವಿಯ ಪುರಾಣ ಪಾರಾಯಣ ಮಾಡುವುದು ವಿಶೇಷ.
ಲಾಕ್ಡೌನ್ ಪೂರ್ವ ಬರುತ್ತಿದ್ದ ಭಕ್ತರ ಪೈಕಿ ಈಗ ಶೇ 20 ರಷ್ಟು ಭಕ್ತರು ದರ್ಶನಕ್ಕಾಗಿ ಭೇಟಿ ನೀಡುತ್ತಿದ್ದಾರೆ.
ಹುಂಡಿಯಲ್ಲಿ ಮತ್ತೆ ಕಾಣಿಕೆ: ಅಂಬಾಮಠದ ಅಂಬಾದೇವಿ ದೇವಸ್ಥಾನದ ಪ್ರಾಂಗಣದಲ್ಲಿರುವ 5 ಹುಂಡಿಗಳಲ್ಲಿ ಕಳೆದ ನವೆಂಬರ್, ಡಿಸೆಂಬರ್ ಮತ್ತು ಜನವರಿಯ ಜಾತ್ರೆ ಸಂದರ್ಭದಲ್ಲಿ ಸೇರಿ 3 ತಿಂಗಳಲ್ಲಿ ₹ 43 ಲಕ್ಷ ಭಕ್ತರಿಂದ ಕಾಣಿಕೆ ಸಂಗ್ರಹವಾಗಿತ್ತು. ಆದರೆ ಕೊರೊನಾ ಮತ್ತು ಲಾಕ್ಡೌನ್ ಪರಿಣಾಮವಾಗಿ ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ಅಂದರೆ ಎಂಟು ತಿಂಗಳಲ್ಲಿ ₹ 7,73,510 ಕಾಣಿಕೆ ಸಂಗ್ರಹವಾಗಿದೆ. ಆರು ತಿಂಗಳು ಕೋವಿಡ್ ಇದ್ದರೂ ಶೇ 20 ರಷ್ಟು ಮಾತ್ರ ಕಾಣಿಕೆ ಸಂಗ್ರಹ ಕಡಿಮೆ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.