ಜಾಲಹಳ್ಳಿ (ರಾಯಚೂರು): ದೇವದುರ್ಗ ತಾಲ್ಲೂಕು ಜಾಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಗುರುವಾರ ಬೆಳಗಿನ ಜಾವ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಿದ್ದು, ಬಂಧಿತ ಆರೋಪಿಯಿಂದ ಆರು ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ವಾಸವಿರುವ ಜಾಲಹಳ್ಳಿಯ ರಂಗನಾಥ ದುರುಗಪ್ಪ ದೊಡ್ಡಮನಿ ಬಂಧಿತ ಆರೋಪಿ. ಬೆಂಗಳೂರಿನಲ್ಲಿ ಪಲ್ಸರ್ ಹಾಗೂ ರಾಯಲ್ ಎನ್ಫಿಲ್ಡ್ ಬೈಕ್ ಕಳ್ಳತನ ಮಾಡಿಕೊಂಡು ತಂದು, ಜಾಲಹಳ್ಳಿ ಮತ್ತು ಸುತ್ತಲಿನ ಗ್ರಾಮಗಳ ಜನರಿಗೆ ಮಾರಾಟ ಮಾಡಿ ಹೋಗುತ್ತಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿಂಥಿಣಿ ಬ್ರಿಡ್ಜ್ ಕಡೆಯಿಂದ ಜಾಲಹಳ್ಳಿಗೆ ಬೆಳಗಿನ ಜಾವ ರಾಯಲ್ ಎನ್ಫಿಲ್ಡ್ನಲ್ಲಿ ಬರುತ್ತಿದ್ದ ಆರೋಪಿಯು, ದೂರದಿಂದ ಪೊಲೀಸರನ್ನು ಗಮನಿಸಿ ವಾಪಸ್ ಹೋಗಿದ್ದು ಸಂಶಯಕ್ಕೀಡು ಮಾಡಿತ್ತು. ಪೊಲೀಸರು ಬೆನ್ನುಬಿದ್ದು ವಿಚಾರಿಸಿದಾಗ ವಿಷಯ ಬೈಕ್ ಕಳ್ಳತನ ಬಯಲಾಗಿದೆ. ಆರೋಪಿಯು ಬೆಂಗಳೂರಿನಲ್ಲಿ ಛಾಯಾಚಿತ್ರಗ್ರಾಹಕ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾನೆ.
ಪಿಎಸ್ಐ ಮುದ್ದುರಂಗಸ್ವಾಮಿ, ಸಿಬ್ಬಂದಿ ಬಾಲಗೌಡ, ದೇವರಾಜ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕುರಿತು ಲಿಂಗಸುಗೂರು ಡಿವೈಎಸ್ಪಿ ಮಂಜುನಾಥ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.