
ರಾಯಚೂರು: ‘ಪಕ್ಷಿಗಳು ಉತ್ತಮ ಪರಿಸರದ ಸಂಕೇತವಾಗಿವೆ. ಅವು ಪೂರಕ ವಾತಾವರಣ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ’ ಎಂದು ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕ ಅಭಿಪ್ರಾಯಪಟ್ಟರು.
ಪ್ರಯತ್ನ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ಟ್ಯಾಗೋರ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಈರಣ್ಣ ಬೆಂಗಾಲಿ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ರಾಯಚೂರು ಪಕ್ಷಿಗಳ ಎರಡು ದಿನಗಳ ಫೋಟೊ ಪ್ರದರ್ಶನ ಉದ್ಘಾಟಸಿ ಅವರು ಮಾತನಾಡಿದರು.
‘ಪಕ್ಷಿಗಳು ಭೂ ಲೋಕದ ಅದ್ಬುತ ಜೀವಿಗಳಾಗಿ, ಮನುಕುಲಕ್ಕೆ ಸಹಕಾರಿಯಾಗಿವೆ. ವಿದ್ಯಾರ್ಥಿಗಳು, ಸಾರ್ವಜನಿಕರು ಪಕ್ಷಿಗಳನ್ನು ಉಳಿಸುವತ್ತ ಗಮನಹರಿಸಬೇಕು’ ಎಂದು ಹೇಳಿದರು.
ಪಕ್ಷಿ ಛಾಯಾಗ್ರಾಹಕ ಈರಣ್ಣ ಬೆಂಗಾಲಿ ಮಾತನಾಡಿ, ‘ರಾಯಚೂರಿನಲ್ಲಿ ಇನ್ನೂರಕ್ಕೂ ಅಧಿಕ ಪ್ರಬೇಧದ ಹಕ್ಕಿಗಳಿವೆ. ಅವುಗಳನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಆಗಬೇಕಿದೆ. ಜನರು ಹಕ್ಕಿಗಳ ಬಗ್ಗೆ ಒಲವು ಹೊಂದಿ, ಪಕ್ಷಿಗಳ ಮಹತ್ವ ಅರಿಯಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಭಿಜ್ಞಾನ ಶಾಲೆಯ ರಮೇಶ ಮಾತನಾಡಿ, ‘ಈರಣ್ಣ ಬೆಂಗಾಲಿ ಅವರು ರಾಯಚೂರಿನ ಪಕ್ಷಿಗಳ ಫೋಟೊ ತೆಗೆದು ಅವುಗಳನ್ನು ಪರಿಚಯಿಸಿದ್ದು, ಅಭಿನಂದನೀಯ. ಪರಿಸರ ಕಾರ್ಯಕ್ಕೆ ನಾವು ಯಾವಾಗಲೂ ಜೊತೆ ಇರಬೇಕು. ಉತ್ತಮ ಪರಿಸರವನ್ನು ನಾವು ಕಾಪಾಡುವಲ್ಲಿ ಗಮನಹರಿಸಬೇಕು. ಪಕ್ಷಿಗಳು ಇರದಿದ್ದರೆ ನಾವಿಲ್ಲ ಎಂಬುದನ್ನು ಮರೆಯಕೂಡದು’ ಎಂದು ಹೇಳಿದರು.
ಮೊಹಿಯುದ್ದೀನ್ ಪೀರಜಾದೆ, ವೀರಹನುಮಾನ, ನೀಲಕಂಠ ಮಳಿಮಠ, ಈರಣ್ಣ ಕೋಸಗಿ, ಹಫಿಜುಲ್ಲಾ, ಬಶೀರಅಹ್ಮದ ಹೊಸಮನಿ, ಪ್ರಭಣ್ಣಗೌಡ, ಬಸವಂತರಾಯ ಪಾಟೀಲ, ಸಲಾವುದ್ದೀನ್, ಅಜಯ್, ಮುನಿಸ್ವಾಮಿ, ಯಲ್ಲಪ್ಪ ಮರ್ಚೆಡ್ ಸೇರಿದಂತೆ ಅಭಿಜ್ಞಾನ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.