ದೇವದುರ್ಗ: ‘ಕೊರೊನಾ ಭೀತಿ ಹಿನ್ನೆಲೆಯಲ್ಲಿ ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ತಾಲ್ಲೂಕಿಗೆ ಆಗಮಿಸಿದ್ದ ಸಾವಿರಾರು ಜನರಿಗೆ ತಾಲ್ಲೂಕು ಆಡಳಿತ ಈಚೆಗೆ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಆದರೆ ಅದನ್ನು ಬಿಜೆಪಿ ಪಕ್ಷದವರು ತಾವೇ ಆಯೋಜಿಸಿರುವುದಾಗಿ ಪ್ರಚಾರ ಪಡೆದುಕೊಂಡರು. ಇದು ನಾಚಿಗೆಗೇಡಿನ ಸಂಗತಿ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಆದ್ದರಿಂದ ತಾಲ್ಲೂಕಿನಲ್ಲಿ ಕೊರೊನಾ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ದೇವದುರ್ಗ ಬ್ಲಾಕ್ ಘಟಕದ ಅಧ್ಯಕ್ಷ ಅಬ್ದುಲ್ ಅಜೀಜ್ಸಾಬ ಅವರು ಪತ್ರಿಕೆ ಹೇಳಿಕೆ ನೀಡಿದ್ದು, ಈಚೆಗೆ ಗುಳೆ ಹೋದವರು ವಾಪಸ್ ತಾಲ್ಲೂಕಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರಿಗೆ ಕೊರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ತಾಲ್ಲೂಕು ಆಡಳಿತ ಅನ್ನದಾಸೋಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿತ್ತು. ಆದರೆ ಬಿಜೆಪಿಯ ಕೆಲವು ಮುಖಂಡರು ಶಾಸಕ ಕೆ.ಶಿವನಗೌಡ ನಾಯಕ ಅಭಿಮಾನಿಗಳ ಬಳಗ ಎಂದು ಹೇಳಿಕೊಂಡು ತಾಲ್ಲೂಕು ಆಡಳಿತ ಮಾಡಿಸಿದ್ದ ಆಹಾರ ಪದಾರ್ಥವನ್ನು ಜನರಿಗೆ ಬಡಿಸುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.