ADVERTISEMENT

ಸಾಹಿತಿಗಳ ಗುರುತಿಸುವ ಕಾರ್ಯವಾಗಲಿ: ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 4:56 IST
Last Updated 8 ಮಾರ್ಚ್ 2021, 4:56 IST
ರಾಯಚೂರಿನ ಕನ್ನಡ ಭವನದಲ್ಲಿ ಭಾನುವಾರ ‘ಸೌಂದರ್ಯ ಮದನ ತಿಲಕ ಹಾಗೂ ನೀತಿ ವೈರಾಗ್ಯ ಅಭಿಪ್ಲುತ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು
ರಾಯಚೂರಿನ ಕನ್ನಡ ಭವನದಲ್ಲಿ ಭಾನುವಾರ ‘ಸೌಂದರ್ಯ ಮದನ ತಿಲಕ ಹಾಗೂ ನೀತಿ ವೈರಾಗ್ಯ ಅಭಿಪ್ಲುತ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು   

ರಾಯಚೂರು: ಜಿಲ್ಲೆಯಾದ್ಯಂತ ಅನೇಕ ಸಾಹಿತಿಗಳು, ಕವಿಗಳು, ಪಂಡಿತರು ಇದ್ದಾರೆ. ಅವರನ್ನು ಗುರುತಿಸುವ ಕಾರ್ಯ ನಡೆಯಬೇಕು. ಕವಿಗಳನ್ನು ಗುರುತಿಸದೆ ಇರುವುದರಿಂದ ಅನೇಕರು ಮರೆಯಾಗಿದ್ದಾರೆ. ಅವರನ್ನು ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು ಎಂದು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ಸುರಭಿ ಸಾಂಸ್ಕೃತಿಕ ಬಳಗ ಆಯೋಜಿಸಿದ್ದ ಹಿರಿಯ ಕವಿ ಸಿದ್ದನಗೌಡ ಮಾಲಿಪಾಟೀಲ ಅವರ ‘ಸೌಂದರ್ಯ ಮದನ ತಿಲಕ ಹಾಗೂ ನೀತಿ ವೈರಾಗ್ಯ ಅಭಿಪ್ಲುತ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ಇಂದು ಅಂತರ್ಜಾಲದ ಹಾವಳಿಯಿಂದಾಗಿ ಮದುವೆ ಎಂಬ ಪವಿತ್ರ ಸಂಬಂಧ ಅರ್ಥವನ್ನೇ ಕಳೆದುಕೊಂಡಿದೆ. ಪ್ರೀತಿ ಪ್ರೇಮದ ಬೆಲೆ ತಿಳಿಯದೇ ಅನೇಕ ದುರಂತಗಳು ಸಂಭವಿಸುತ್ತಿವೆ. ಯುವ ಪೀಳಿಗೆಗೆ ಬುದ್ಧಿವಾದ ಹೇಳಿದರೆ ಹಿರಿಯರು ಪೆಡಂಭೂತವಾಗಿ ಕಾಣುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಸಿದ್ದನಗೌಡ ಈ ಕೃತಿಯ ಮೂಲಕ ಸಾಹಿತ್ಯಕ್ಕೆ ಮತ್ತು ಗೃಹಸ್ಥಾಶ್ರಮಿಗಳಿಗೆ ಅದ್ಭುತ ಕೊಡುಗೆ ಕೊಟ್ಟಿದ್ದಾರೆ. ಗೌಡರು ಈಗಾಗಲೇ ಮೂರು ಕೃತಿಗಳನ್ನು ರಚಿಸಿದ್ದು, ಇನ್ನು ಹೆಚ್ಚಿನ ಕೃತಿಗಳನ್ನು ರಚಿಸಲಿ’ ಎಂದು ಸಲಹೆ ನೀಡಿದರು.

ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಸಾಹಿತ್ಯ ಎನ್ನುವುದು ಮಲ್ಲಿಗೆ ಇದ್ದಂತೆ. ಅದು ಪರಿಮಳ ಸೂಸುತ್ತದೆ. ಸಿದ್ದನಗೌಡರು ರಚಿಸಿದ ಈ ಕೃತಿಯಲ್ಲಿ ಲೋಕಾನುಭವ ಇದ್ದು, ಇದೊಂದು ಪರಿಪಕ್ವ ಕೃತಿಯಾಗಿದೆ ಎಂದು ತಿಳಿಸಿದರು.
ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿ ಮಠ ಅವರು ಕೃತಿ ಪರಿಚಯ ಮಾಡಿದರು.ಮನ್ಸಲಾಪುರದ ವೇ. ಮೂ. ಶಿವಾನಂದಯ್ಯ ಹಿರೇಮಠ, ಸುರಭಿ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಜಿ.ಬಸವರಾಜ, ಕಸಾಪದ ಜಿಲ್ಲಾ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ ಹಾಗೂ ಮತ್ತಿತರರು ಇದ್ದರು.

ರೇಣುಕಾದೇವಿ ಪ್ರಾರ್ಥಿಸಿದರು. ಈರಣ್ಣಬೆಂಗಾಲಿ ಸ್ವಾಗತಿ ಸಿದರು. ಮಂಜುನಾಥ ನಿರೂಪಿಸಿದರು. ರುದ್ರಯ್ಯ ಗುಣಾರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.