ಲಿಂಗಸುಗೂರು: ‘ಕೃಷ್ಣಾ ನಡುಗಡ್ಡೆ ಗ್ರಾಮಗಳನ್ನು ಸಂಪರ್ಕಿಸುವ ಕಡದರಗಡ್ಡಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಪ್ರಾಥಮಿಕ ಸರ್ವೆ ಕಾರ್ಯ ಆರಂಭಗೊಂಡಿದೆ. ಶೀಘ್ರದಲ್ಲಿಯೆ ಸೇತುವೆ ಕಾಮಗಾರಿ ಆರಂಭಿಸಲಾಗುವುದು’ ಎಂದು ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಬುಧವಾರ ಕಡದರಗಡ್ಡಿ ಬಳಿ ಸರ್ವೆ ಕಾರ್ಯ ಪರಿಶೀಲನೆ ನಡೆಸಿದ ಅವರು, ‘ನಡುಗಡ್ಡೆ ಗ್ರಾಮಗಳ ಬಹು ವರ್ಷಗಳ ಕನಸು ಸಾಕಾರಗೊಳ್ಳುತ್ತಿದೆ. ಗುಂತಗೋಳ, ಗೋನವಾಟ್ಲ ಸೇರಿದಂತೆ ತಾಲ್ಲೂಕು ಕೇಂದ್ರ ಸಂಪರ್ಕಿಸಲು ಹೆಚ್ಚು ಅನುಕೂಲ ಆಗಲಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ₹ 25ಕೋಟಿ ನೀಡಿದೆ’ ಎಂದು ತಿಳಿಸಿದರು.
‘ನಡುಗಡ್ಡೆ ಗ್ರಾಮಗಳಾದ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಹಂಚಿನಾಳ ಸೇರಿದಂತೆ ನಡುಗಡ್ಡೆ ಪ್ರದೇಶಗಳ ಜನತೆ ಖಾಸಗಿ ಮತ್ತು ಸರ್ಕಾರಿ ಕೆಲಸಗಳಿಗೆ ಹೋಗಿ ಬರಲು ಮಳೆಗಾಲದಲ್ಲಿ ಸಂಕಷ್ಟ ಎದುರಿಸುವಂತಾಗಿತ್ತು. ಗ್ರಾಮ ಪಂಚಾಯಿತಿ ಮತ್ತು ನಾಡ ತಹಶೀಲ್ದಾರ್ ಕಚೇರಿಗಳಿಗೆ ಅತ್ಯಂತ ಕಡಿಮೆ ಅಂತರದಲ್ಲಿ ಸಂಪರ್ಕಿಸಲು ಉಪಯೋಗ ಆಗಲಿದೆ’ ಎಂದರು.
ಮುಖಂಡರಾದ ಚೆನ್ನಬಸವ ವಿಠಲಾಪುರ, ವಿರೇಶ ಬೊಮ್ಮನಾಳ, ದುರುಗಪ್ಪ ಅಂತರಗಂಗಿ, ಬಸಪ್ಪ ಮ್ಯಾಗಳಮನಿ, ಗುಂಡಪ್ಪ ನಾಲತವಾಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.