ADVERTISEMENT

ಕೃಷ್ಣಾ ಗ್ರಾಮಕ್ಕೆ ಬಸ್ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 3:28 IST
Last Updated 6 ನವೆಂಬರ್ 2020, 3:28 IST
ಶಕ್ತಿನಗರದ ಬಳಿಯ ಗಡಿಭಾಗದ ಕೃಷ್ಣಾ ಗ್ರಾಮಕ್ಕೆ ಗುರುವಾರ ಬಂದ ಬಸ್‌ಗೆ ತಳಿರು ತೋರಣಗಳ ಸಿಂಗಾರಿಸಿ, ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದರು
ಶಕ್ತಿನಗರದ ಬಳಿಯ ಗಡಿಭಾಗದ ಕೃಷ್ಣಾ ಗ್ರಾಮಕ್ಕೆ ಗುರುವಾರ ಬಂದ ಬಸ್‌ಗೆ ತಳಿರು ತೋರಣಗಳ ಸಿಂಗಾರಿಸಿ, ಗ್ರಾಮಸ್ಥರು ಪೂಜೆ ಸಲ್ಲಿಸಿ ಸಂಭ್ರಮಿಸಿದರು   

ಶಕ್ತಿನಗರ: ಇಲ್ಲಿನ ಗಡಿಭಾಗದಲ್ಲಿರುವ ತೆಲಂಗಾಣದ ಕೃಷ್ಣಾ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಸಿಕ್ಕ ಕಾರಣ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ .

ಸ್ವಾತಂತ್ರ್ಯ ಸಿಕ್ಕರೂ ಕೂಡ, ಈ ಗ್ರಾಮಕ್ಕೆ ರಾಜ್ಯ ಸಾರಿಗೆ ಇಲಾಖೆಯ ಯಾವುದೇ ಬಸ್‌ಗಳ ಬಾರದ ಹಿನ್ನೆಲೆಯಲ್ಲಿ ಇಲ್ಲಿನ ಮಕ್ಕಳು ನಿತ್ಯವೂ ನಡೆದುಕೊಂಡೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಇಲ್ಲಿನ ವಿದ್ಯಾರ್ಥಿಗಳು, ಸಾರ್ವಜನಿಕರು 10 ಕಿಲೋ ಮೀಟರ್ ವರೆಗೆ ನಡೆದು ಕೊಂಡೇ ಹೋಗಬೇಕಾಗಿತ್ತು. ಈಗ ಆ ಗ್ರಾಮಕ್ಕೆ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ. ಹಾಗಾಗಿ ಈ ಗ್ರಾಮದಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದೆ.

ಗ್ರಾಮದಲ್ಲಿ ಬಸ್‌ ಸೌಕರ್ಯ ಆಗಿರುವುದರಿಂದ, ಗ್ರಾಮಸ್ಥರೇ ಖುಷಿಯಿಂದ ಬಸ್ಸಿಗೆ ಹೂವಿನ ಅಲಂಕಾರ ಮಾಡಿ ಸರ್ಕಾರಿ ಬಸ್‌ ಸ್ವಾಗತಿಸಿದರು. ಗಡಿನಾಡು ಕನ್ನಡಿಗರ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಾರಿಗೆ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಿದರು. ನಂತರ ಹೊಸ ಬಸ್ಸಿನಲ್ಲಿ ಮೊದಲ ಪ್ರಯಾಣ ಬೆಳೆಸಿದ ಗ್ರಾಮಸ್ಥರು ಖುಷಿಪಟ್ಟರು.

ADVERTISEMENT

ಗಡಿಭಾಗದ ಕೃಷ್ಣಾ ಗ್ರಾಮದಿಂದ ಇಂದುಪುರ, ಶಕ್ತಿನಗರ ಗ್ರಾಮಗಳ ಮಾರ್ಗವಾಗಿ ರಾಯಚೂರು ನಗರಕ್ಕೆ ತಲುಪಲಿದೆ. ವಿದ್ಯಾರ್ಥಿಗಳ ಅನುಕೂಲ ತಕ್ಕಂತೆ, ದಿನಕ್ಕೆ 8 ಬಾರಿ ಬಸ್‌ ಸಂಚಾರ ಮಾಡಲಾಗಿದೆ.

‘ಹೋರಾಟದ ಫಲವಾಗಿ, ನಮ್ಮೂರಿಗೆ ಸರ್ಕಾರಿ ಬಸ್‌ ಬಂದೇ ಬಿಟ್ಟಿತು. ಬರುವ ದಿನಗಳಲ್ಲಿ ಯಾದಗಿರಿ, ಕಲಬುರ್ಗಿಗೆಹೋಗುವ ಎಕ್ಸ್‌ಪ್ರೆಸ್‌ ಬಸ್‌ಗಳನ್ನು ಗಡಿ ಭಾಗದ ಕೃಷ್ಣಾ ಗ್ರಾಮದ ರೈಲು ನಿಲ್ದಾಣದವರಗೆ ವಿಸ್ತರಿಸುವಂತೆ ರಾಯಚೂರು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು’ ಎಂದು ಗಡಿನಾಡು ಕನ್ನಡಿಗರ ಸಂಘದ ಅಧ್ಯಕ್ಷ ನಿಜಾಮುದ್ದೀನ್ ತಿಳಿಸಿದರು.

ಗಡಿಭಾಗದ ಕೃಷ್ಣಾ ಗ್ರಾಮಕ್ಕೆ ಬಸ್‌ ವ್ಯವಸ್ಥೆ ಒದಗಿಸಿದ್ದು ಸಂತಸದ ವಿಷಯ ನಮ್ಮ ಹೋರಾಟಕ್ಕೆ ಪರೋಕ್ಷ ಮತ್ತು ಪ್ರತ್ಯೇಕವಾಗಿ ಸಹಕರಿಸಿ ಬೆಂಬಲಿಸಿದ ಎಲ್ಲರಿಗೂ ಅಭಿನಂದನೆ ಎಂದು ಗಡಿನಾಡು ಕನ್ನಡಿಗರ ಸಂಘದ ಉಪಾಧ್ಯಕ್ಷ ಅಮರ್‌ದೀಕ್ಷಿತ್ ಹೇಳಿದರು.

ಗಡಿನಾಡು ಕನ್ನಡ ಸಂಘದ ಗೌರವಾಧ್ಯಕ್ಷ ಎಸ್.ರಾಮಲಿಂಗಪ್ಪ, ಅಧ್ಯಕ್ಷ ನಿಜಾಮುದ್ದೀನ್, ಬಿ.ಸುರೇಶ, ನಾಗಭೂಷಣ, ಮಹಾದೇವಪ್ಪ , ಡಿ.ಕೆ.ಕೃಷ್ಣಾಪ್ಪ, ಶಂಕರನಾಯಕ, ಶಕ್ತಿಸಿಂಗ್ ಠಾಕೂರ್, ನರಸಿಂಹಚಾರ್ಯ ಜೋಷಿ, ಮುನಾಫ್, ಜವಾಹರಲಾಲ್‌, ನಾಗರಾಜ, ನರಸಿಂಹಯ್ಯಶೆಟ್ಟಿ, ಇಕ್ಬಾಲ್‌ ಪಾಷ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.