ಮುದಗಲ್: ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಅವರು ಅಲೆಮಾರಿ ಮಕ್ಕಳು ಹಾಗೂ ಜನಾಂಗದ ಜತೆ ಹೊಸ ವರ್ಷ ಆಚರಣೆ ಮಾಡಿದರು.
ಪಟ್ಟಣದ ಸರ್ವೆ ನಂಬರ್ 9ರಲ್ಲಿ ಇರುವ ಅಲೆಮಾರಿ ಜನಾಂಗದ ಮನೆ ಅಂಗಳಕ್ಕೆ ತೆರಳಿ, ಅವರ ಮಕ್ಕಳ ಜತೆ ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು. 40 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ಮಾನವೀಯತೆ ಮೆರೆದರು.
ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ಗುಡಿಸಲಿಗೆ ಬಂದು ಹೊಸ ವರ್ಷ ಆಚರಣೆ ಮಾಡುತ್ತಿರುವುದನ್ನು ಕಂಡ ಅಲೆಮಾರಿ ಮಕ್ಕಳು ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.
ಪಿಎಸ್ಐ ಪ್ರಕಾಶ ಡಂಬಾಳ ಮಾತನಾಡಿ, ‘ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅಕ್ಷರವಂತರಾಗಿ ಮಾಡಿ’ ಎಂದು ಸಲಹೆ ನೀಡದರು. ನಂತರ ಮಾತೋಶ್ರೀ ಶರಣಮ್ಮನವರ ಗೋ ಶಾಲೆಗೆ ಭೇಟಿ ನೀಡಿದರು. ರೂಪಾ ಪ್ರಕಾಶ ಡಂಬಾಳ, ಕಾನ್ಸ್ಟೆಬಲ್ಗಳಾದ ಅಡಿವಪ್ಪ, ಹನಮಂತಪ್ಪ, ಶಿವನಗೌಡ, ಅಮರೇಶ ಇತರರಿದ್ದರು.
ಕೂಲಿಕಾರರಿಂದ ಹೊಸ ವರ್ಷಾಚರಣೆ
ಸಿಂಧನೂರು: ತಾಲ್ಲೂಕಿನ ಜಾಲಿಹಾಳ ಗ್ರಾಮದಲ್ಲಿ ಕೂಲಿಕೆಲಸ ಮಾಡುವ ಮಹಿಳೆಯರು ಭಾನುವಾರ ಹೊಸ ವರ್ಷಾಚರಿಸುವ ಮೂಲಕ ಸಂಭ್ರಮಿಸಿದರು.
ಪ್ರತಿನಿತ್ಯ ಭತ್ತದ ಸಸಿನಾಟಿ ಮಾಡಲು ಹೋಗುವ ಗುಂಪಿನ ಮಹಿಳೆಯರು ಬೇವಿನಹಾಳ ಸೀಮೆಯ ಗದ್ದೆಯಲ್ಲಿ ಸಸಿ ನಾಟಿ ಮಾಡುವ ಮುಂಚೆ ಕೇಕ್ ಕತ್ತರಿಸಿ ಸಿಹಿ ವಿತರಿಸಿದರು.
ಚಿಂದಿ ಆಯುವ ಮಕ್ಕಳೊಂದಿಗೆ ಹೊಸ ವರ್ಷ ಆಚರಣೆ
ರಾಯಚೂರು: ಹೊಸ ವರ್ಷದ ಅಂಗವಾಗಿ ಶನಿವಾರ ಮಧ್ಯರಾತ್ರಿ ಚಿತ್ರನಟಿ ಪೂಜಾ ರಮೇಶ ಅವರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಮತ್ತು ರಸ್ತೆ ಬದಿಯಲ್ಲಿ ನಿರಾಶ್ರಿತರಿಗೆ, ನಿರ್ಗತಿಕರು, ಭಿಕ್ಷುಕರಿಗೆ ಬೆಡ್ ಶೀಟ್ ನೀಡಿದರು.
ಭಾನುವಾರ ಬಂಬೂ ಬಜಾರ್ ಮೇದಾರ್ ಓಣಿ ಹಾಗೂ ಕೊಳಗೇರಿ ಮಹಿಳೆಯರ ಸಮಸ್ಯೆ ಆಲಿಸಿ ಕುಶಲೋಪರಿ ವಿಚಾರಿಸಿದರು. ಚಿಂದಿ ಆಯುವವರ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ವಿನೂತನವಾಗಿ ಆಚರಿಸಿದರು. ಈ ವೇಳೆ ಕಲಾ ಸಂಕುಲ ಸಂಸ್ಥೆಯ ಮಾರುತಿ ಬಡಿಗೇರ, ವಸಂತಲಕ್ಷ್ಮಿ, ಮೌನೇಶ್ ಗೋನುವಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.