ರಾಯಚೂರು: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 44 ಕಾರ್ಮಿಕ ಕಾಯ್ದೆಗಳನ್ನು ಕೇವಲ 4 ಸಂಹಿತೆಗಳನ್ನಾಗಿ ಮಾಡಲು ಹೊರಟಿದೆ. ಇವುಗಳನ್ನು ಕಾರ್ಮಿಕರ ಮೇಲೆ ಹೇರಲು ಹೊರಟಿದೆ ಇದರಿಂದಾಗಿ ಕಾರ್ಮಿಕರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ’ ಎಂದು ಎಐಸಿಸಿಟಿಯು ರಾಜ್ಯ ಘಟಕದ ಅಧ್ಯಕ್ಷ ಅಪ್ಪಣ್ಣ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ಆಯೋಜಿಸಿದ್ದ ಕಾರ್ಮಿಕರ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾರ್ಪೊರೇಟ್ ಪರ ಆಡಳಿತ ಮಾಡುತ್ತಿರುವ ಕೇಂದ್ರ ಸರ್ಕಾರ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರಿಗೆ ಇದುವರೆಗೂ ಇದ್ದ ಹಕ್ಕನ್ನು ಕಸಿದುಕೊಳ್ಳಲಿದೆ. ಇನ್ನು ಮುಂದೆ ಕಾರ್ಮಿಕರು ಸಂಘಗಳನ್ನು ಕಟ್ಟುವಂತಿಲ್ಲ ತಮ್ಮ ಬೇಡಿಕೆಗಳಿಗಾಗಿ ಹೋರಾಟಗಳನ್ನು ಮಾಡದಂತೆ ಕಾರ್ಮಿಕರನ್ನು ಶೋಷಣೆಗೊಳ ಪಡಿಸಲಾಗುತ್ತಿದೆ. ಜೊತೆಗೆ ಸರ್ಕಾರದ ಪೂರ್ವಾನುಮತಿ ಇಲ್ಲದೆ ಮಾಲೀಕರು ಯಾವಾಗ ಬೇಕಾದರೂ ಕಾರ್ಖಾನೆ ತೆರೆಯಬಹುದು ಅಥವಾ ಮುಚ್ಚಬಹುದು ಈ ಸ್ವಾತಂತ್ರ್ಯವನ್ನು ಮಾಲೀಕರಿಗೆ ಕೊಡಲಾಗಿದೆ ಇದರಿಂದಾಗಿ ಕಾರ್ಮಿಕರಿಗೆ ತಮ್ಮ ಉದ್ಯೋಗದ ಭದ್ರತೆ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಲ್ಕು ಸಂಹಿತೆಗಳ ವಿರುದ್ಧ ಮೇ20ರಂದು ಅಖಿಲ ಭಾರತದಲ್ಲಿ ನಡೆಯುವ ಕಾರ್ಮಿಕರ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.
ಎಐಯುಟಿಯುಸಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಎಸ್.ವೀರೇಶ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಬಲಿಷ್ಠ ಹೋರಾಟಕ್ಕೆ ಕಾರ್ಮಿಕರು ಮುಂದಾಗ ಬೇಕು’ ಎಂದು ಹೇಳಿದರು.
ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಘಟಕದ ಸಂಚಾಲಕ ಕೆ. ಜಿ. ವೀರೇಶ ಮಾತನಾಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎಚ್. ಪದ್ಮಾ, ಎಂ. ರವಿ, ಮಲ್ಲಪ್ಪ ದಣಿ, ಬಾಷುಮಿಯ, ತಿಮ್ಮಾ ರೆಡ್ಡಿ, ಡಿ.ಎಚ್. ಕಂಬಳಿ, ನಾಗರಾಜ ಪೂಜಾರ, ತಿಮ್ಮಪ್ಪ ಸ್ವಾಮಿ, ಮಹೇಶ, ಕಾಶಪ್ಪ, ಎಸ್. ಎನ್. ಫೀರ ಪಾಲ್ಗೊಂಡಿದ್ದರು. ಡಿ. ಎಸ್. ಶರಣಬಸವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.