ದೇವದುರ್ಗ: ಅರಕೇರಾ ತಾಲ್ಲೂಕಿನ ಮುಂಡರಗಿ ಗ್ರಾಮ ಪಂಚಾಯಿತಿ ಸ್ವಚ್ಛ ವಾಹಿನಿ ವಾಹನ ದುರ್ಬಳಕೆ ಮಾಡಿಕೊಂಡ ಬಗ್ಗೆ ಕ್ರಮ ಕೈಗೊಂಡು ಮುಖ್ಯಮಂತ್ರಿ ಕಚೇರಿಗೆ ಅನುಪಾಲನಾ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೂಲಕ ರಾಯಚೂರು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಪತ್ರ ಬರೆಯಲಾಗಿದೆ. ಪರಿಶೀಲನೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಕಚೇರಿ ವಿಶೇಷ ಕರ್ತವ್ಯ ಅಧಿಕಾರಿ ವೈಷ್ಣವಿ ಅವರು ಪತ್ರ ಬರೆದಿದ್ದಾರೆ.
‘ಪ್ರಜಾವಾಣಿ’ಯ ಜುಲೈ 17ರ ಸಂಚಿಕೆಯಲ್ಲಿ ‘ಗ್ರಾ.ಪಂ ಸ್ವಚ್ಛ ವಾಹಿನಿ ವಾಹನ ದುರ್ಬಳಕೆ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.
ಅರಕೇರಾ ತಾಲ್ಲೂಕಿನ ಮುಂಡರಗಿ ಗ್ರಾಮ ಪಂಚಾಯಿತಿಗೆ ಸೇರಿದ ಕಸ ವಿಲೇವಾರಿ ವಾಹನವನ್ನು ಗ್ರಾ.ಪಂ ಅಧ್ಯಕ್ಷೆ ಪತಿ ಬಾಲಯ್ಯ ನಾಯಕ ಹಾಗೂ ಸ್ವಚ್ಛ ವಾಹಿನಿ ಚಾಲಕಿಯ ಪತಿ ಮೌನೇಶ ದುರ್ಬಳಕೆ ಮಾಡಿಕೊಂಡಿದ್ದಾರೆ. 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಸಾಮಗ್ರಿ ಸಾಗಣೆಗೆ ಮತ್ತು ನರೇಗಾ ಕಾಮಗಾರಿ ನಡೆಯುವ ಸ್ಥಳಕ್ಕೆ ಸಾಮಗ್ರಿ ಸರಬರಾಜು ಸೇರಿದಂತೆ ಇತರೆ ಕಾರ್ಯಕ್ಕೆ ವಾಹನ ದುರ್ಬಳಕೆ ಮಾಡಿಕೊಂಡ ಪಿಡಿಒ ಮತ್ತು ಅಧ್ಯಕ್ಷೆ ಪತಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಅಧ್ಯಕ್ಷೆಯ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.