ರಾಯಚೂರು: ಜಿಲ್ಲೆಯಲ್ಲಿ ಗ್ರಾಮೀಣ ವಲಯ ಹೊರತುಪಡಿಸಿ ಇನ್ನುಳಿದ ಕಡೆ ಅನಗತ್ಯ ಸಂಚರಿಸುವವರಿಗೆ ಕಡಿವಾಣ ಹಾಕುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅಗತ್ಯ ಸೇವೆಗಳು ಮತ್ತು ಮಾಧ್ಯಮಕ್ಕೆ ಸಂಬಂಧಿಸಿದವರಿಗೆ ಜಿಲ್ಲಾಡಳಿತವು ಪಾಸ್ ವಿತರಿಸುವ ಕಾರ್ಯ ಆರಂಭಿಸಿದೆ.
ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಾಕಾಬಂದಿ ಮುಂದುವರಿಸಿದ್ದು, ಪ್ರತಿಯೊಂದು ವಾಹನ ಮತ್ತು ಕಾಲ್ನಡಿಯಲ್ಲಿ ಸಂಚರಿಸುವವರನ್ನು ವಿಚಾರಣೆ ಮಾಡುತ್ತಿದ್ದಾರೆ. ಇದಲ್ಲದೆ ಪೊಲೀಸರು ವಿವಿಧ ಬಡಾವಣೆಗಳಿಗೆ ಸಂಚರಿಸಿ ಜನದಟ್ಟಣೆ ಏರ್ಪಡುವುದರ ಮೇಲೆ ನಿಗಾ ವಹಿಸುತ್ತಿದ್ದಾರೆ. ತಡರಾತ್ರಿ ರಸ್ತೆಗಳಲ್ಲಿ ನಿಂತುಕೊಳ್ಳುವವರಿಗೆ ಲಾಠಿ ಏಟು ಕೊಡಲಾಗುತ್ತಿದೆ.
ಅನಗತ್ಯ ಸಂಚರಿಸುವವರಿಗೆ ಬುಧವಾರದಿಂದಲೇ ಎಚ್ಚರಿಕೆ ನೀಡುತ್ತಾ ಬಂದಿದ್ದ ಪೊಲೀಸರು, ಗುರುವಾರದಿಂದ ಬೈಕ್ ಜಪ್ತಿ ಮಾಡಿಕೊಳ್ಳಲಾರಂಭಿಸಿದ್ದಾರೆ. ಇದುವರೆಗೂ 120 ಕ್ಕೂ ಹೆಚ್ಚು ಬೈಕ್ ಜಪ್ತಿ ಮಾಡಿಕೊಂಡಿದ್ದು, ಏಪ್ರಿಲ್ 14 ರ ನಂತರ ವಾಪಸ್ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಇಡೀ ದಿನ ಒಂದು ಕಡೆಯಲ್ಲಿ ಯುವಕರನ್ನು ಹಿಡಿದಿಟ್ಟು ಸಂಚಾರ ನಿಯಮಗಳ ಪಾಠ, ಕೊರೊನಾ ಮುನ್ನಚ್ಚರಿಕೆ ಕ್ರಮಗಳ ಪಾಠವನ್ನು ಶಾಲಾ ಮಕ್ಕಳ ರೀತಿಯಲ್ಲಿ ಪೊಲೀಸರು ತಿಳಿಸಿಕೊಟ್ಟು ಕಳುಹಿಸುತ್ತಿದ್ದಾರೆ. ಉಪಟಳ ತೋರಿಸುವವರಿಗೆ ಬಸ್ಕಿ ಹೊಡೆಯುವ ಶಿಕ್ಷೆಯೂ ಆಗುತ್ತಿದೆ.
ಪಾಸ್ ವಿತರಣೆ: ಪತ್ರಕರ್ತರು, ಪತ್ರಿಕೆ ಹಂಚುವವರು, ಪತ್ರಿಕೆ ಮಾರಾಟ ಮಳಿಗೆಗಳು ಹಾಗೂ ಛಾಯಾಚಿತ್ರಗ್ರಾಹಕರಿಗೆ ಜಿಲ್ಲಾಡಳಿತದಿಂದ ಪಾಸ್ ವಿತರಿಸಲಾಗುತ್ತಿದೆ.
ಸ್ಥಳೀಯ ಮಟ್ಟದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದಿಂದಲೂ ಪಾಸ್ ಒದಗಿಸಲಾಗಿದೆ. ವಾಟರ್ಮ್ಯಾನ್ಗಳು, ಸ್ಥಳೀಯ ಸಂಸ್ಥೆಗಳ ಕೆಲಸಗಾರರು, ಪೆಟ್ರೋಲ್ ಬಂಕ್ ಕೆಲಸ ಮಾಡುವವರು, ಎಲ್ಪಿಜಿ ಸರಬರಾಜು ಮಾಡುವವರು, ಪೋಸ್ಟ್ ಆಫೀಸ್ ಕೆಲಸಗಾರರು, ಫ್ರೂಟ್ಸ್ , ವೆಜಿಟೇಬಲ್ಸ್, ಕಿರಾಣಿ ಅಂಗಡಿ ಕೆಲಸಗಾರರು, ಹಾಲಿನ ವ್ಯಾಪಾರಿಗಳು, ಖಾಸಗಿ ಸೆಕ್ಯೂರಿಟಿ ಗಾರ್ಡ್ಸ್, ಬ್ಯಾಂಕ್ ಕೆಲಸಗಾರರು, ಮೆಡಿಕಲ್ ಲ್ಯಾಬ್ ಮತ್ತು ಕೇಬಲ್ ಕೆಲಸಗಾರರು, ಎಪಿಎಂಸಿ ಕೆಲಸಗಾರರು, ಸಂಪರ್ಕ ಸಾಧನಗಳ ಕೆಲಸಗಾರರು ಹಾಗೂ ಎಲ್ಲಾ ರೀತಿಯ ಜೀವನಾವಶ್ಯಕ ವಸ್ತುಗಳ ಸಾಗಣೆಗಾಗಿ ಮತ್ತು ಸೇವೆಗಳಲ್ಲಿ ಇರುವವರಿಗೆ ಅನುಮತಿ ನೀಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.