
ದೇವದುರ್ಗ: ಜಿಲ್ಲಾ ಕಾಂಗ್ರೆಸ್ ಮುಖಂಡರು ವೈಯಕ್ತಿಕ ಪ್ರತಿಷ್ಠೆಗೆ ಪಕ್ಷವನ್ನು ಬಲಿಕೊಡುತ್ತಿರುವುದು ಪಕ್ಷ ಮತ್ತಷ್ಟು ನೆಲಕಚ್ಚುವಂತೆ ಮಾಡುತ್ತಿರುವುದು ತೀವ್ರ ಬೇಸರ ತಂದಿದೆ ಎಂದು ಮಾಜಿ ಪುರಸಭೆ ಅಧ್ಯಕ್ಷ ರಂಗಪ್ಪ ಗೋಸಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಬಣ ರಾಜಕೀಯದಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಪಕ್ಷಕ್ಕಾಗಿ ಬೂತ್ ಮಟ್ಟದಲ್ಲಿ ದುಡಿದು ಪಕ್ಷ ವಿರೋಧಿ ಮತ್ತು ರೈತರಿಗೆ ಮೋಸ ಮಾಡಿದನ್ನು ಪ್ರಶ್ನಿಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಜಾಗೊಳಿಸಿ ತಮ್ಮ ಚಾಕರಿ ಮಾಡುವ ದಲ್ಲಾಳಿ ಕಾರ್ಯಕರ್ತರಿಗೆ ಬ್ಲಾಕ್ ಕಾಂಗ್ರೆಸ್ ಹುದ್ದೆ ನೀಡಿದ್ದಾರೆ’ ಎಂದರು.
‘ಪಕ್ಷಕ್ಕಾಗಿ ಬೂತ್ ಮಟ್ಟದಲ್ಲಿ ದುಡಿದು ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿದ ಕಾರ್ಯಕರ್ತರನ್ನು ಕಳೆದ ಎರಡುವರೆ ವರ್ಷದಿಂದ ನಿರ್ಲಕ್ಷಿಸಿ, ದಲ್ಲಾಳಿಗಳಂತೆ ವರ್ತಿಸುತ್ತಿರುವ ಪಕ್ಷಕ್ಕೆ ದುಡಿಯದ ಕಾರ್ಯಕರ್ತರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡಿದ್ದಾರೆ ಎಂದು ಆಪದಾಸಿದರು.
ವಕೀಲ ಮರಿಲಿಂಗಪ್ಪ ಕೋಳೂರ,‘ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ದೇವದುರ್ಗದಲ್ಲಿ ಮೇಲ್ಜಾತಿಯವರಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡುತ್ತಿದ್ದು, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ದೇವದುರ್ಗದ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮತಗಳು ಬೇಕಾಗಿಲ್ಲವೆ? ಎಂದು ಪ್ರಶ್ನಿಸಿದರು.
‘ಜಿಲ್ಲಾಧ್ಯಕ್ಷರ ಕಡೆಗಣಿಸಿ ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಿಸಿರುವುದು ಸ್ಥಳೀಯ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಈ ಕುರಿತು ದೂರು ನೀಡುತ್ತೇವೆ. ಪ್ರಸಕ್ತ ವರ್ಷ ಸಾಲು ಸಾಲು ಸ್ಥಳೀಯ ಚುನಾವಣೆಗಳು ಎದುರಾಗಲಿವೇ ಪಕ್ಷದಲ್ಲಿನ ಬಣ ರಾಜಕೀಯಕ್ಕೆ ಕಡಿವಾಣ ಹಾಕಿ. ನೇಮಕಗೊಂಡ ಮತ್ತು ನಾಮ ನಿರ್ದೇಶನಗೊಂಡ ಎಲ್ಲಾ ಹುದ್ದೆಗಳನ್ನು ವಜಗೊಳಿಸಿ ಮರು ನೇಮಕಕ್ಕೆ ನಿಯೋಗ ಕೊಂಡೊಯ್ಯುತ್ತೇವೆ’ ಎಂದು ತಿಳಿಸಿದರು.
ಮುಖಂಡರಾದ ರಾಜ ವಾಸುದೇವ ನಾಯಕ, ಶಿವರಾಜ ನಾಯಕ ಕರಿಗುಡ್ಡ, ಯಕ್ಬಾಲ್ ಸಾಬ್ ಹೌದೊಡ್ಡಿ, ಪುರಸಭೆ ಮಾಜಿ ಸದಸ್ಯ ಮಾನಪ್ಪ ಮೇಸ್ತ್ರಿ, ಸುಲ್ತಾನ್ ಬಾಬು, ಅಯ್ಯಪ್ಪ ಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.