ರಾಯಚೂರು: ಪಾಕಿಸ್ತಾನ ಹಾಗೂ ಆಕ್ರಮಿತ ಕಾಶ್ಮೀರ ಪ್ರದೇಶದ ಮೇಲೆ ಏರ್ಸ್ಟ್ರೈಕ್ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ಬುಧವಾರ ನಡೆಯಬೇಕಿದ್ದ ಕೇಂದ್ರ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಹಾಗೂ ಸಂವಿಧಾನ ಉಳಿಸಿ ಅಭಿಯಾನ ರದ್ದುಪಡಿಸಲಾಯಿತು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ರಾಯಚೂರು ನಗರದ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಲಬುರಗಿ ವಿಭಾಗೀಯ ಮಟ್ಟದ ಪ್ರತಿಭಟನಾ ಸಮಾವೇಶ ರದ್ದುಗೊಳಿಸಲಾಯಿತು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ, ಶಾಸಕ ಬಸನಗೌಡ ದದ್ದಲ್ ಹಾಗೂ ಸಂಸದ ಜಿ.ಕುಮಾರ ನಾಯಕ ಅವರು ಮಾಧ್ಯಮಗಳ ಜತೆಗೆ ಮಾತನಾಡಿ, ‘ದೇಶದ ಸೈನಿಕರು ಪಾಕಿಸ್ತಾನದ ಮೇಲೆ ಏರ್ಸ್ಟ್ರೈಕ್ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಸಮಾವೇಶವನ್ನು ಮುಖ್ಯಮಂತ್ರಿ ಆದೇಶದ ಮೇರೆಗೆ ರದ್ದು ಮಾಡಿದ್ದೇವೆ. ನಮಗೆ ದೇಶ ಮೊದಲು ನಂತರ ಆಂತರಿಕ ಹೋರಾಟ. ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಪ್ರತಿಕಾರವಾಗಿ ನಮ್ಮ ಸೈನಿಕರು ಏರ್ಸ್ಟ್ರೈಕ್ ಮಾಡಿದ್ದು ಹೆಮ್ಮೆಯ ವಿಷಯ. ದೇಶದ ನಾಗರಿಕರ ಪ್ರಾಣ ಕಳೆದ ಉಗ್ರಗಾಮಿಗಳಿಗೆ ಆಶ್ರಯತಾಣದ ಮೇಲೆ ಏರ್ಸ್ಟ್ರೈಕ್ ಮಾಡಿ ಉತ್ತರ ನೀಡಿದ್ದೇವೆ. ಉಗ್ರರ ದಾಳಿಗೆ ಅನೇಕ ಮಹಿಳೆಯರು ತಮ್ಮ ಪತಿಯರನ್ನು ಕಳೆದುಕೊಂಡ ಕಾರಣ ಇದಕ್ಕೆ ಸೇಡಿನ ರೀತಿಯಲ್ಲಿ ಸೈನಿಕರು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಮಾಡಿದ್ದು ಶ್ಲಾಘನೀಯ. ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ಪರ ನಿಲ್ಲಲಿದೆ. ಪಾಕಿಸ್ತಾನದ ಮೇಲೆ ಏನೇ ಕಾರ್ಯಾಚರಣೆ ನಡೆಸಿದರೂ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಗಣ್ಯರ ದಂಡು ಆಗಮಿಸಬೇಕಿತ್ತು. ಜಿಲ್ಲೆಯ ಶಾಸಕರು, ಸಂಸದರು, ಕಾರ್ಯಕರ್ತರು ಆಗಮಿಸಿದ್ದರು. ಆನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ವೇದಿಕೆಯಿಂದ ನಿರ್ಗಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.