ADVERTISEMENT

ಸಿಂಧನೂರು: ಆಮ್ಲಜನಕ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಮೇ 2021, 5:19 IST
Last Updated 5 ಮೇ 2021, 5:19 IST
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಆಮ್ಲಜನಕ ಘಟಕಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಮಂಗಳವಾರ ಚಾಲನೆ ನೀಡಿದರು
ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಆಮ್ಲಜನಕ ಘಟಕಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಮಂಗಳವಾರ ಚಾಲನೆ ನೀಡಿದರು   

ಸಿಂಧನೂರು: ಸ್ಥಳೀಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಆಮ್ಲಜನಕ ಘಟಕಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಮಂಗಳವಾರ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಕ್ಸಿಜನ್ ಘಟಕದಿಂದ 50 ಜನ ಕೊರೊನಾ ಸೋಂಕಿತ ವ್ಯಕ್ತಿಗಳಿಗೆಆಮ್ಲಜನಕ ಪೂರೈಸಬಹುದಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 100 ಹಾಸಿಗೆಯ ಸಾಮರ್ಥ್ಯವಿದ್ದು, ಅದರಲ್ಲಿ 25 ಹಾಸಿಗೆಯನ್ನು ಕೋವಿಡ್ ಸೋಂಕಿತರಿಗೆ ಮೀಸಲಿರಿಸಲಾಗಿದೆ. 50 ಜನ ಸೋಂಕಿತರನ್ನು ದಾಖಲಿಸಿ ಕೊಳ್ಳಬಹುದಾದ ಸಾಮರ್ಥ್ಯವಿದೆ. ಆದರೆ ಕೊರೊನಾ ರಹಿತ ರೋಗಿಗಳ ತಪಾಸಣೆಗೆ ತೊಂದರೆ ಆಗುತ್ತದೆ ಎಂಬ ಉದ್ದೇಶದಿಂದ 25 ಹಾಸಿಗೆ ಮಾತ್ರ ಸೋಂಕಿತರಿಗೆ ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕು ಕೇಂದ್ರದಲ್ಲಿ ಪೂರ್ಣಪ್ರಮಾಣದ ಆಮ್ಲಜನಕ ಘಟಕ ಹೊಂದಿರುವ ಪ್ರಥಮ ಆಸ್ಪತ್ರೆ ಎಂದು ವಿವರಿಸಿದರು.

ಕೋವಿಡ್ ಸೇವೆಗೆ ಹೆಚ್ಚಿನ ಸಿಬ್ಬಂದಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಿಎಸ್‍ಸಿ ನರ್ಸಿಂಗ್ ಪೂರ್ಣಗೊಳಿಸಿರುವ 30 ಜನ ಇದ್ದಾರೆ. ಅವರನ್ನು ಕೋವಿಡ್ ಸೋಂಕಿತರ ಸೇವೆಗೆ ಬಳಸಿಕೊಳ್ಳುವಂತೆ ಶಾಸಕ ವೆಂಕಟರಾವ್ ನಾಡಗೌಡ ತಾಲ್ಲೂಕು ಆರೋಗ್ಯಾಧಿಕಾರಿಗೆ ಅವರು ಸೂಚಿಸಿದರು.

ADVERTISEMENT

ಪ್ರಸ್ತುತ ಅವರನ್ನು ಚೆಕ್‍ಪೋಸ್ಟ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೌಶಲವಿರುವ ಅವರನ್ನು ಕೋವಿಡ್ ಸೆಂಟರ್‌ಗೆ ಬಳಸಿಕೊಳ್ಳುವುದು ಔಚಿತ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ಒಪ್ಪಿಕೊಂಡರು.

ನಾಲ್ಕು ದಿನಕ್ಕೊಮ್ಮೆ ನೀರು: ರಂಜಾನ್ ಮತ್ತು ಕೋವಿಡ್ ಇರುವುದರಿಂದ ನೀರಿನ ಅವಶ್ಯಕತೆ ಹೆಚ್ಚಿನ ಪ್ರಮಾಣದಲ್ಲಿದೆ. ಆದ್ದರಿಂದ ಇನ್ನೂ ಮುಂದೆ 4 ದಿನಕ್ಕೊಮ್ಮೆ ಕನಿಷ್ಠ ರಂಜಾನ್ ತಿಂಗಳು ಮುಗಿಯುವ ತನಕ ನೀರು ಬಿಡುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿರುವುದಾಗಿ ನಾಡಗೌಡ ಹೇಳಿದರು.

ತುರ್ವಿಹಾಳ ಬಳಿಯಿರುವ 120 ಎಕರೆಯಲ್ಲಿರುವ ಕೆರೆಯಲ್ಲಿ ನೀರು ತುಂಬಿರುವುದರಿಂದ ಮೇ, ಜೂನ್, ಜುಲೈವರೆಗೆ ನೀರಿನ ಕೊರತೆ ಆಗದಿರುವುದನ್ನು ಗಮನಿಸಿ ಈ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದ ಅವರು ನಗರಸಭೆ ಅಧ್ಯಕ್ಷರು ಕ್ವಾರೆಂಟೈನ್‍ನಲ್ಲಿ ಇರುವುದರಿಂದ ಅವರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಅವರಿಗೂ ಈ ವಿಷಯ ಕುರಿತು ಮನವರಿಕೆ ಮಾಡುವಂತೆ ಪೌರಾಯುಕ್ತರಿಗೆ ತಿಳಿಸಿದ್ದೇನೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆಂದು ಅನಿಸಿದರೆ ರಂಜಾನ್ ತಿಂಗಳ ನಂತರ ಪುನಃ 6 ದಿನಕ್ಕೊಮ್ಮೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಲ್ಲೂಕು ಪ್ರಭಾರಿ ಆರೋಗ್ಯಾಧಿಕಾರಿ ಡಾ. ಜೀವನೇಶ್ವರಯ್ಯ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಹನುಮಂತರೆಡ್ಡಿ, ಡಾ.ಸುರೇಶಗೌಡ ಹಾಗೂ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.