ಜೈಲು (ಪ್ರಾತಿನಿಧಿಕ ಚಿತ್ರ)
ಲಿಂಗಸುಗೂರು (ರಾಯಚೂರು ಜಿಲ್ಲೆ): ಜಮೀನಿನಲ್ಲಿ ಸಾಗುವಳಿ ಮಾಡುವ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ಕ್ರಿಮಿನಾಶಕ ಕುಡಿಸಿ ಕೊಲೆ ಮಾಡಿದ 10 ಅಪರಾಧಿಗಳಿಗೆ ಇಲ್ಲಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಜೀವಾವಧಿ ಶಿಕ್ಷೆ ವಿಧಿಸಿದೆ.
ತಾಲ್ಲೂಕಿನ ಹನಮಗುಡ್ಡ ಹೊಸೂರು ಗ್ರಾಮದಲ್ಲಿ ಹೊಲ ಸಾಗುವಳಿ ಮಾಡುವ ವಿಚಾರವಾಗಿ 2019ರ ಜನವರಿ 1ರಂದು ಅಮರೇಶ ಅವರಿಗೆ ಬಲವಂತವಾಗಿ ಕ್ರಿಮಿನಾಶಕ ಕುಡಿಸಿ ಆರೋಪಿಗಳು ಕೊಲೆ ಮಾಡಿದ್ದರು.
ಬಸಪ್ಪ ಹುಲಗಪ್ಪ, ಶರಣಪ್ಪ ಗೌಂಡಿ, ಹುಲಗಪ್ಪ ಗೌಂಡಿ, ಅಮರೇಶ ಗೌಂಡಿ, ದೇವಪ್ಪ ಗೌಂಡಿ, ಶಂಕ್ರಮ್ಮ ಗೌಂಡಿ, ಯಲ್ಲಮ್ಮ ಭೋವಿ, ಶರಣಪ್ಪ ಭೋವಿ, ಹನುಮವ್ವ ಶರಣಪ್ಪ ಹಾಗೂ ವಿನೋದ
ಗೌಂಡಿ ವಿರುದ್ಧ ಮುದಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಸ್ಕಿ ಸಿಪಿಐ ಚನ್ನಯ್ಯ ಹಿರೇಮಠ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ₹37,500 ದಂಡ ವಿಧಿಸಿ ಶುಕ್ರವಾರ ಆದೇಶ ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಆರ್.ಎ ಗಡಕರಿ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.