
ರಾಯಚೂರು: ‘ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗಳಲ್ಲಿ ಶೇ 30ರಷ್ಟು ಪ್ರಶಸ್ತಿಗಳನ್ನು ಈ ನೆಲದ ಮೂಲನಿವಾಸಿಗಳಿಗೆ ಮೀಸಲಿಡಬೇಕು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಇಲ್ಲಿ ಒತ್ತಾಯಿಸಿದರು.
ಭಾನುವಾರ ನಡೆದ ಹನ್ನೊಂದನೆಯ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ರಾಷ್ಟ್ರೀಯ ಯುವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಪ್ರಾಧಿಕಾರ, ಅಕಾಡೆಮಿಗಳನ್ನು ರಚಿಸುವಾಗ ಸರ್ಕಾರ ಅವುಗಳಿಗೆ ದಲಿತ ಸದಸ್ಯರನ್ನು ನೇಮಿಸಬೇಕು. ರಾಜ್ಯದಲ್ಲಿ 30ರಷ್ಟು ಪ್ರಶಸ್ತಿಗಳನ್ನು ದಲಿತರಿಗೆ ಮೀಸಲಿಡಬೇಕು. ಈ ಮೂಲಕ ದಲಿತ ಸಮುದಾಯವನ್ನು ಜಾಗೃತಗೊಳಿಸಬೇಕು’ ಎಂದು ಮನವಿ ಮಾಡಿದರು.
‘ಉಪದ್ರವಿ ಸಾಹಿತಿಗಳು ನಮ್ಮ ಮಧ್ಯೆ ಇದ್ದಾರೆ. ಇಂಥವರು ನಮ್ಮನ್ನು ಉಳಿಸಲು ಸಾಧ್ಯವಿಲ್ಲ. ದಲಿತರು ಕೃತಿಗಳನ್ನು ಬರೆದದ್ದನ್ನೇ ಸಾಧನೆಯಾಗಿ ಪರಿಗಣಿಸಬೇಕು. ದಲಿತರೇ ದೇಶದ ಮೂಲನಿವಾಸಿಗಳು. ನಮಗೆ ಕಮಲ ಮುಖ್ಯವಲ್ಲ, ಕಮಲದ ಕೆಳಗಿನ ಕೆಸರು ಮುಖ್ಯ. ಕಾರಣ ಅದರ ಕೆಳಗೆ ಬ್ರಹ್ಮರಾಕ್ಷಸ ಇದ್ದಾನೆ. ಹೀಗಾಗಿ ದಲಿತ ಸಂವೇದನೆಗಳನ್ನು ರಕ್ಷಿಸುವ ಹೊಣೆ ಎಲ್ಲರ ಮೇಲಿದೆ’ ಎಂದು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.