ADVERTISEMENT

ತುಂಗಭದ್ರಾ ನದಿ ತೀರದಲ್ಲಿ ಪುಷ್ಕರ ಆಚರಣೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 4:06 IST
Last Updated 14 ನವೆಂಬರ್ 2020, 4:06 IST
ಸಿಂಧನೂರಿನ ವಾಸುದೇವರಾವ್ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುಷ್ಕರ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು
ಸಿಂಧನೂರಿನ ವಾಸುದೇವರಾವ್ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುಷ್ಕರ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು   

ಸಿಂಧನೂರು: ಪ್ರತಿ 12 ವರ್ಷಕ್ಕೊಮ್ಮೆ ಪುಷ್ಕರ ಆಚರಣೆಗೊಳ್ಳುತ್ತಿದ್ದು, ಈ ಬಾರಿ ತುಂಗಭದ್ರಾ ನದಿಗೆ ಪುಷ್ಕರ ಸೌಭಾಗ್ಯ ದೊರಕಿದೆ. ಕಾರಣ ತಾಲ್ಲೂಕಿನ ದಢೇಸುಗೂರು ಬಳಿ ಇರುವ ತುಂಗಭದ್ರಾ ನದಿಯಲ್ಲಿ ಪುಷ್ಕರ ಆಚರಣೆಗೆ ವಿವಿಧ ಸಮಾಜದ ಮುಖಂಡರು ನಿರ್ಧಾರಿಸಿದ್ದು, ಕೋವಿಡ್-19 ಮುಂಜಾಗ್ರತೆಯಿಂದ ಆಚರಿಸಲಾಗುವುದು ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ಸ್ಥಳೀಯ ವಾಸುದೇವರಾವ್ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪುಷ್ಕರ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಬಾರಿ ಕೃಷ್ಣ ನದಿ ವ್ಯಾಪ್ತಿಯ ದೇವಸುಗೂರುನಲ್ಲಿ ಪುಷ್ಕರ ಆಚರಣೆ ಕೈಗೊಳ್ಳಲಾಗಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ಅದರ ಖರ್ಚು ವ್ಯಚ್ಚಗಳನ್ನು ಭರಿಸಲಾಗಿತ್ತು. ಈ ಬಾರಿ ತುಂಗಭದ್ರಾ ನದಿ ತೀರದಲ್ಲಿ ಪುಷ್ಕರ ಆಚರಣೆಗೆ ಸರ್ಕಾರಿ ಸೌಕರ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೇ ಸಮಾಜದ ವಿವಿಧ ಗಣ್ಯರು ಸೇರಿ ಅದರ ಖರ್ಚು ವೆಚ್ಚ ಭರಿಸಲಿದ್ದಾರೆ ಎಂದರು.

ADVERTISEMENT

ಹೊಸಪೇಟೆ ಜಿಲ್ಲೆಯವರು ಹಂಪಿಯಲ್ಲಿ ಪುಷ್ಕರ ಆಚರಣೆಗೆ ಮಾಡಲು ಸಿದ್ದತೆ ಕೈಗೊಂಡಿದ್ದಾರೆ. ಅದರಂತೆ ದಢೇಸುಗೂರು ಗ್ರಾಮದ ಕೃಷಿ ಇಲಾಖೆಯ ಫಾರ್ಮ್‍ನಲ್ಲಿರುವ ಶಿವಾಲಯದಲ್ಲಿ ನ.20 ರಿಂದ ಡಿ.1 ರವರೆಗೆ ಆಚರಣೆ ನಡೆಯಲಿದ್ದು, 10 ದಿನಗಳ ಕಾಲ ಭಕ್ತಾಧಿಗಳು ಪುಷ್ಕರ ಆಚರಣೆಯಲ್ಲಿ ಭಾಗವಹಿಸುವರು. 20 ರಿಂದ 30 ಜನರು ಹೋಗಿ 15 ನಿಮಿಷದಲ್ಲಿ ಸ್ನಾನ ಮಾಡಿ ಬಂದಾಗ, ಪುನಃ ಇನ್ನೊಂದು ಗುಂಪಿನ ಜನರನ್ನು ಬಿಡುವ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಕುಡಿಯುವ ನೀರು, ವಿದ್ಯುತ್ ದೀಪ, ಮೂತ್ರಾಲಯ, ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗುವುದು ಎಂದರು.

ಕಮ್ಮವಾರಿ ಸಂಘದ ಮುಖಂಡ ಬಿ.ಹರ್ಷ ಮಾತನಾಡಿ, ಉತ್ತರ ಭಾರತದಲ್ಲಿ ಕುಂಭ ಮೇಳವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರ ಸೋಮಯಾಜಿ ಪುಷ್ಕರ ಆಚರಣೆಯ ಕುರಿತು ವಿವರಿಸಿದರು. ವಿಶ್ವಕರ್ಮ ಸಮಾಜದ ಅಧ್ಯಕ್ಷ ಶ್ರೀನಿವಾಸ್‍ರಾವ್, ಆರ್ಯವೈಶ ಸಮಾಜದ ಅಧ್ಯಕ್ಷ ಶಿವಾನಂದಗುಪ್ತ, ಕಾಪು ಸಮಾಜದ ಅಧ್ಯಕ್ಷ ಶೇಷಗಿರಿ, ಗಾಯಿತ್ರಿ ಬ್ರಾಹ್ಮಣ ಟ್ರಸ್ಟ್‌ ಅಧ್ಯಕ್ಷ ವೆಂಕಟೇಶ್ವರರಾವ್ ಇದ್ದರು. ಕಮ್ಮವಾರಿ ಸಂಘದ ಅಧ್ಯಕ್ಷ ಮುರಳಿಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ್ವರರಾವ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.