ಮಸ್ಕಿ: ತಾಲ್ಲೂಕಿನಲ್ಲಿ ಹಾದುಹೋಗುವ ನಂದವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿ ವಿಳಂಬವಾಗಿದ್ದು ಪಕ್ಷಾತೀತ ಹೋರಾಟ ಹಮ್ಮಿಕೊಳ್ಳಲು ರೈತರು ನಿರ್ಧರಿಸಿದ್ದಾರೆ.
ತಾಲ್ಲೂಕಿನ ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಆವರಣದಲ್ಲಿ ಭಾನುವಾರ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ರೈತರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
‘ಎರಡು ವರ್ಷಗಳ ಹಿಂದೆಯೇ ಯೋಜನೆ ಪೂರ್ಣಗೊಳ್ಳಬೇಕಿತ್ತು. ಸರ್ಕಾರಗಳ ದ್ವಂದ್ವ ನೀತಿ, ಗುತ್ತಿಗೆದಾರರ ಕಳಪೆ ಕಾಮಗಾರಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಜಮೀನಿಗೆ ಹನಿ ನೀರೂ ಪೂರೈಕೆಯಾಗಿಲ್ಲ’ ಎಂದು ಸಭೆಯಲ್ಲಿ ರೈತರು ಆಕ್ರೋಶ ಹೊರ ಹಾಕಿದರು.
ಸಭೆಯಲ್ಲಿ ಮಾತನಾಡಿದ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಪಕ್ಷಾತೀತವಾಗಿ ನಡೆಯುವ ರೈತರ ಹೋರಾಟವನ್ನು ಬೆಂಬಲಿಸುವೆ ಎಂದು ಘೋಷಿಸಿದರು.
ಹೋರಾಟ ಸಮಿತಿ ಕಾರ್ಯದರ್ಶಿ ಎಚ್.ಬಿ. ಮುರಾರಿ, ಬಸವಂತರಾಯ ಕುರಿ, ಶರಣಗೌಡ ಬಸಾಪೂರ, ರಮೇಶ ಶಾಸ್ತ್ರಿ ಮಾತನಾಡಿದರು. ಮುಖಂಡರಾದ ಚಂದ್ರಕಾಂತ ನಾಡಗೌಡ, ಮಲ್ಲನಗೌಡ ಪಾಟೀಲ ಹಳ್ಳಿ ಮಾತನಾಡಿದರು.
ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ ಅಧ್ಯಕ್ಷತೆ ವಹಿಸಿದ್ದರು. ಬಸಾಪುರ ಭಾಗಮ್ಮ ಪೂಜಾರಿ, ಮಲ್ಲೇಶಗೌಡ ಮಟ್ಟೂರ, ಗುಂಡಪ್ಪ ನಾಯಕ, ಬಸವರಾಜ ತುರಡಗಿ, ಸುರೇಶಗೌಡ ಮುದಗಲ್, ಶರಣಪ್ಪ ಜಾವೂರು, ಆದನಗೌಡ ಪಾಟೀಲ, ದೊಡ್ಡಪ್ಪ ಸಾಹುಕಾರ, ತಿಮ್ಮನಗೌಡ ಚುಕನಟ್ಟಿ, ಮಹೇಂದ್ರಗೌಡ ಪಾಟೀಲ, ಕರಿಬಸನಗೌಡ, ಗುರುನಾಥರೆಡ್ಡಿ, ಏಕಅಮರಣ್ಣ, ಅಯ್ಯನಗೌಡ, ಗವಿಸಿದ್ದಪ್ಪ, ಅಮರಗುಂಡಪ್ಪ, ಸಿದ್ದನಗೌಡ, ಶಿವನಗೌಡ ಸೇರಿದಂತೆ ಯೋಜನೆ ವ್ಯಾಪ್ತಿಯ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.