ಹಟ್ಟಿ ಚಿನ್ನದಗಣಿ: ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವಿನ ಹಣ್ಣಿಗೆ ಭಾರಿ ಬೇಡಿಕೆ ಇದ್ದು, ಗ್ರಾಹಕರು ಉತ್ಸಾಹದಿಂದ ಹಣ್ಣು ಖರೀದಿ ಮಾಡುತ್ತಿದ್ದಾರೆ.
ಪಟ್ಟಣದ ಹಳೆ ಬಸ್ ನಿಲ್ದಾಣ ಕ್ಯಾಂಪ್ ಬಸ್ ನಿಲ್ದಾಣ, ಸೇರಿದಂತೆ ಹಲವು ಹಣ್ಣಿನ ಅಂಗಡಿಗಳಲ್ಲಿ ಹಾಗೂ ತಳ್ಳು ಬಂಡಿಗಳಲ್ಲಿ ವಿವಿಧ ತಳಿಯ ಮಾವಿನ ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಕೆಲ ತಳಿಯ ಮಾವಿನ ಹಣ್ಣುಗಳ ಬೆಲೆ ತುಸು ಹೆಚ್ಚಾದರೂ ಅವುಗಳ ರುಚಿಗೆ ಮನಸೋತು ಜನರು ಖರೀದಿಸುತ್ತಿದ್ದಾರೆ.
ಯುಗಾದಿ ಹಬ್ಬದ ನಂತರ ಮಾರುಕಟ್ಟೆಗೆ ಬರುತ್ತಿದ್ದ ಮಾವಿನ ಹಣ್ಣುಗಳು ಈ ಸಾರಿ ಒಂದು ತಿಂಗಳ ನಂತರ ಮಾರುಕಟ್ಟೆಗೆ ತಡವಾಗಿ ಬಂದಿವೆ. ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಹಣ್ಣುಗಳು ನಷ್ಟ ಉಂಟು ಮಾಡಿದ್ದು, ಈ ಭಾರಿ ರೈತರ ಮಾವಿನ ಹಣ್ಣಿಗೆ ಬೇಡಿಕೆ ಇದ್ದು, ಬೆಳೆಗಾರರು ಲಾಭದ ನೀರಿಕ್ಷೆಯಲ್ಲಿದ್ದಾರೆ.
ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಮಾವು ಬೆಳೆದ ರೈತರು ಸ್ಧಳೀಯವಾಗಿ ಮಾರಾಟ ಮಾಡದೆ, ಇರುವುರಿಂದ ಬೇರೆ ಜಿಲ್ಲೆಗಳಿಂದ ಹಣ್ಣುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಬೆಲೆ ಹೆಚ್ಚಳವಾಗಿದ್ದು ಮಾವಿನ ಹಣ್ಣಿಗೆ ಬಾರಿ ಬೇಡಿಕೆ ಇದೆ ಎನ್ನುತ್ತಾರೆ ಮಾರಾಟಗಾರರು.
ರಾಯಚೂರು, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಬೆಳೆದ ಮಾವಿನ ಹಣ್ಣಿಗಳಿಗೆ ಬೇಡಿಕೆ ಉಂಟಾಗಿದೆ. ಬೇರೆ ಜಿಲ್ಲೆಗಳಿಂದ ತಂದ ಹಣ್ಣುಗಳನ್ನು ಪಕ್ಕದ ಗ್ರಾಮಗಳಾದ ಆನ್ವರಿ, ನಿಲೋಗಲ್, ಗೆಜ್ಜಲಗಟ್ಟಾ, ಗ್ರಾಮಗಳ ಜನರು ಇಲ್ಲಿಂದ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವಾರ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಿದಾಗ ಪ್ರತಿ ಕೆಜಿಗೆ ₹ 60 ರಿಂದ ₹ 70 ಮಾರಾಟವಾಗಿದ್ದವು. ನಂತರ ಪ್ರತಿದಿನ ಬೆಲೆ ಹೆಚ್ಚಳವಾಗುತ್ತಿದ್ದು ಪ್ರತಿ ಕೆಜಿಗೆ ₹ 100ರಿಂದ ₹ 120 ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಮಹಮ್ಮದ್ ಹುಸೇನ್.
*
ಹಟ್ಟಿ ಪಟ್ಟಣದಲ್ಲಿ ನಿತ್ಯ 40 ರಿಂದ 50 ಕ್ವಿಂಟಾಲ್ ಮಾವಿನ ಹಣ್ಣು ಸರಬರಾಜು ಮಾಡುತ್ತೇವೆ. ಈ ಬಾರಿ ಮಾವಿನ ಹಣ್ಣಿಗೆ ಬೇಡಿಕೆ ಇದೆ
ರಾಜು, ಮಾವಿನ ಹಣ್ಣು ಮಾರಾಟಗಾರ
*
ಕಳೆದ ವರ್ಷ ಕೋವಿಡ್ನಿಂದಾಗಿ ಮಾವಿನ ಹಣ್ಣು ತಿನ್ನಬೇಕಾದರೆ ವಿಚಾರ ಮಾಡಬೇಕಾಗಿತ್ತು. ಆದರೀಗ ಅಂತಹ ಯೋಚನೆ ಇಲ್ಲ. ಹಣ್ಣುಗಳನ್ನು ಖರೀದಿಸಿಸಲು ಮುಂದಾಗಿದ್ದೇವೆ
ಇಮಾಮ್ಸಾಬ್, ಗ್ರಾಹಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.