ADVERTISEMENT

ಪುರಸಭೆಯ ಮುಖ್ಯಾಧಿಕಾರಿ ಅಮಾನತಿಗೆ ಒತ್ತಾಯ

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 11:48 IST
Last Updated 8 ಸೆಪ್ಟೆಂಬರ್ 2022, 11:48 IST
ಪ್ರಭುರಾಜ ಕೊಡ್ಲಿ
ಪ್ರಭುರಾಜ ಕೊಡ್ಲಿ   

ಮಾನ್ವಿ: ‘ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಸ್ಥಳೀಯ ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಟೆಂಡರ್ ಕರೆಯುವಲ್ಲಿ ನಿರ್ಲಕ್ಷ್ಯವಹಿಸಿರುವ ಪುರಸಭೆಯ ಮುಖ್ಯಾಧಿಕಾರಿಯನ್ನು ಅಮಾನತುಗೊಳಿಸಬೇಕು’ ಎಂದು ಜನಶಕ್ತಿ ಕೇಂದ್ರ ಸಂಘಟನೆಯ ಅಧ್ಯಕ್ಷ ಪ್ರಭುರಾಜ ಕೊಡ್ಲಿ ಒತ್ತಾಯಿಸಿದ್ದಾರೆ.

ಬುಧವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಹಾಗೂ ಹೈಕೋರ್ಟ್ ನಿರ್ದೇಶನದಂತೆ ಮಾನ್ವಿ ಪುರಸಭೆಯ 51 ವಾಣಿಜ್ಯ ಮಳೆಗೆಗಳ ಬಾಡಿಗೆ ಟೆಂಡರ್ ಕರೆಯಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ವತಿಯಿಂದ ಹೋರಾಟ ನಡೆಸಲಾಗಿತ್ತು. ಆದರೆ ಅಧಿಕಾರಿಗಳು ಸೆ.1ರಿಂದ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಸೆ. 15ರಂದು ಹರಾಜು ಪ್ರಕ್ರಿಯೆ ನಡೆಸುವುದಾಗಿ ಭರವಸೆ ನೀಡಿದ್ದರು. ಅಧಿಕಾರಿಗಳ ಭರವಸೆ ಮೇರೆಗೆ ಅನಿರ್ದಿಷ್ಟಾವಧಿ ಧರಣಿ ಕೈಬಿಡಲಾಗಿತ್ತು’ ಎಂದರು.

‘ಪುರಸಭೆ ಮಳಿಗೆಗಳ ಬಾಡಿಗೆ ಟೆಂಡರ್ ಪ್ರಕ್ರಿಯೆ ನಡೆಸಲು ಆ.17ರಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಪುರಸಭೆ ಮುಖ್ಯಾಧಿಕಾರಿ ಗಂಗಾಧರ ಅವರು ರಾಜಕೀಯ ಪಕ್ಷಗಳ ಪ್ರಭಾವದಿಂದ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಸ್ಥಳೀಯ ಪುರಸಭೆಗೆ ಪ್ರತಿ ತಿಂಗಳು ₹ 4ಲಕ್ಷ ಆದಾಯ ನಷ್ಟ ಉಂಟಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ ಟೆಂಡರ್ ಕರೆಯಲು ಮತ್ತು ಮುಖ್ಯಾಧಿಕಾರಿ ಗಂಗಾಧರ ಅಮಾನತಿಗೆ ಒತ್ತಾಯಿಸಿ ಸೆ.15ರಿಂದ ಸ್ಥಳೀಯ ಶಾಸಕರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಹಾಗೂ ಸೆ.17ರಂದು ಜಿಲ್ಲೆಗೆ ಆಗಮಿಸಲಿರುವ ಉಸ್ತುವಾರಿ ಸಚಿವರ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ಪ್ರಗತಿಪರ ಸಂಘಟನೆಗಳ ಮುಖಂಡರಾದ ಎಸ್.ಎಂ.ಶಾನವಾಜ್, ಪಂಪಾಪತಿ ಹಡಪದ, ಶೇಖ್ ಮೋಹಿನುದ್ದೀನ್, ಗಿರಿ ನಾಯಕ, ಈರಣ್ಣ ಗವಿಗಟ್, ರಮೇಶ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.