ADVERTISEMENT

ಸ್ವಚ್ಛತಾ ಸಿಬ್ಬಂದಿಯ ವೇತನ ಬಾಕಿ | ವಿಭಾಗೀಯ ನಿಯಂತ್ರಣಾಧಿಕಾರಿ ಭೇಟಿ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 7:32 IST
Last Updated 6 ಜುಲೈ 2025, 7:32 IST
ಸಿಂಧನೂರಿನ ಬಸ್ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಸಿಂಧನೂರಿನ ಬಸ್ ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು   

ಸಿಂಧನೂರು: ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಮಿಕರಿಗೆ ಬಾಕಿ ವೇತನ ಪಾವತಿಸದಿರುವುದು, ಸುರಕ್ಷತಾ  ಸಾಧನಗಳನ್ನು ನೀಡದೆ ಅಸುರಕ್ಷತಾ ಪ್ರದೇಶದ ತ್ಯಾಜ್ಯ ವಿಲೇವಾರಿ ಸೇರಿ ಮತ್ತಿತರ ಕೆಲಸಗಳಿಗೆ ಗುತ್ತಿಗೆದಾರರು ಹಾಗೂ ನಿಗಮದ ಅಧಿಕಾರಿಗಳು ಬಲವಂತ ಪಡಿಸುತ್ತಿದ್ದಾರೆಂಬ ಎಐಸಿಸಿಟಿಯು ಸಂಘಟನೆಯ ಆರೋಪದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎಸ್.ಚಂದ್ರಶೇಖರ ಸಿಂಧನೂರು ನಗರದ ಬಸ್ ನಿಲ್ದಾಣಕ್ಕೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಬಸ್ ನಿಲ್ದಾಣದ ಆವರಣ, ಸಾರಿಗೆ ಸಂಸ್ಥೆ ಬಸ್‍ಗಳು ನಿಲ್ಲುವ ಪ್ಲಾಟ್ ಫಾರ್ಮ್, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ವೀಕ್ಷಿಸಿದ ಅವರು ಕೆಲ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು.

ಕನ್ನಡ ಪರ ಸಂಘಟನೆಗಳ ಮುಖಂಡರು,‘ಬಸ್ ನಿಲ್ದಾಣಕ್ಕೆ ಕಾಂಪೌಂಡ್ ಇಲ್ಲ. ಪಕ್ಕದ ಅಂಗಡಿ, ಹೋಟೆಲ್, ಬಾರ್‌ಗಳ ತ್ಯಾಜ್ಯವನ್ನು ತಂದು ಬಸ್ ನಿಲ್ದಾಣದ ಆವರಣದಲ್ಲಿ ಹಾಕಲಾಗುತ್ತಿದೆ. ಶೌಚಾಲಯ ನಿರ್ವಹಣೆ ಇಲ್ಲ. ಆದಾಗ್ಯೂ ಅಧಿಕ ಶುಲ್ಕ ಪಡೆಯುತ್ತಿದ್ದಾರೆ. ವಾಹನ ನಿಲುಗಡೆ ಗುತ್ತಿಗೆ ಪಡೆದವರು ನಿರಂತರ ಕಲಹ ಮಾಡುತ್ತಿದ್ದಾರೆ’ ಎಂದು ಗಮನ ಸೆಳೆದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ,‘ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಬಸ್ ಘಟಕದ ವ್ಯವಸ್ಥಾಪಕ ಹೊನ್ನಪ್ಪ ಹಾಗೂ ಸಾರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.