
ಲಿಂಗಸುಗೂರು: ‘ಜನಪರ ಕಾಳಜಿ ಇಟ್ಟುಕೊಂಡು ರಾಜಕೀಯಕ್ಕೆ ಬರಬೇಕು. ಆದರೆ ಹಣ ಗಳಿಸುವ ಉದ್ದೇಶದಿಂದ ರಾಜಕೀಯಕ್ಕೆ ಬರಬೇಡಿ’ ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಅವರ 72ನೇ ಜನ್ಮದಿನದ ಪ್ರಯುಕ್ತ ಅವರ ಅಭಿಮಾನಿ ಬಳಗ ಮಂಗಳವಾರ ಹಮ್ಮಿಕೊಂಡಿದ್ದ ಹುಟ್ಟಹಬ್ಬದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕೀಯದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಾಗ ಮಾತ್ರ ಜನರ ವಿಶ್ವಾಸ ಗಳಿಸಲು ಸಾಧ್ಯವಾಗುತ್ತಿದೆ. ದುಡ್ಡು ಮಾಡುವುದೇ ರಾಜಕಾರಣ ಎನ್ನುವ ವಾತವಾರಣ ನಿರ್ಮಾಣವಾಗಿದೆ. ಅದರಿಂದ ಪ್ರಾಮಾಣಿಕ ರಾಜಕಾರಣಿಗಳಿಗೆ ಕಪ್ಪು ಚುಕ್ಕೆ ತಂದಂತಾಗುತ್ತದೆ. ಶಾಸಕರಾದವರು ಮೊದಲು ತಮ್ಮ ಕ್ಷೇತ್ರದ ಸಮಸ್ಯೆ ಹಾಗೂ ಬೇಡಿಕೆಗಳು ಏನು ಎಂಬುದು ಅರಿತು ಕೆಲಸ ಮಾಡಬೇಕು. ಈ ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ₹ 100 ಕೋಟಿ ಹಾಗೂ ₹ 25 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದೆ ಅದನ್ನು ಸದ್ಬಳಕೆ ಮಾಡುವ ಹಾಗೂ ಸಚಿವರ ಬಳಿ ತೆರಳಿ ಹೆಚ್ಚಿನ ಅನುದಾನ ತಂದು ಕೆಲಸ ಮಾಡುವ ಇಚ್ಛಾಶಕ್ತಿ ಬೇಕು’ ಎಂದು ಹೇಳಿದರು.
ಡಾ.ಬಿ.ಎಸ್ ದಿವಟರ್, ಡಿ.ಜಿ ಗುರಿಕಾರ, ಹನುಮಂತಪ್ಪ ಕಂದಗಲ್, ಪಾಮಯ್ಯ ಮುರಾರಿ, ಭೂಪನಗೌಡ ಪಾಟೀಲ, ಗುಂಡಪ್ಪ ನಾಯಕ, ಡಾ.ಅಮರೇಶ ಪಾಟೀಲ, ಡಾ.ನಾಗನಗೌಡ ಬಯ್ಯಾಪುರ, ಬಸವರಾಜ ಗಣೇಕಲ್, ಅನೀಶ ಪಾಶಾ, ಚನ್ನಾರೆಡ್ಡಿ ಬಿರಾದಾರ ಸೇರಿದಂತೆ ಅಪಾರ ಅಭಿಮಾನಿಗಳು ಹಾಜರಿದ್ದರು.