ರಾಯಚೂರು: ರಾಯಚೂರಿನ ಹಿರಿಯ ಚಿತ್ರಕಲಾವಿದ ಎಚ್.ಎಚ್.ಮ್ಯಾದಾರ ಅವರ ಚಿತ್ರಗಳು ಅದರಲ್ಲಿ ವಿಶೇಷವಾಗಿ ಚುಕ್ಕೆ ಚಿತ್ರಗಳು ಅಪರೂಪದ ಕಲಾಕೃತಿಗಳಾಗಿವೆ ಎಂದು ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿತ್ರಕಲಾವಿದ ಪ್ರೊ.ಅಂದಾನಿ ವಿ.ಜಿ ಹೇಳಿದರು.
ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ’ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ’ ಉದ್ಘಾಟಿಸಿ ಮಾತನಾಡಿದರು.
ನಾಡಿನ ಹಿಂದಿನ ಚುಕ್ಕೆ ಚಿತ್ರಕಲಾವಿದ ವಿ.ಎಸ್.ಬುರಾಣಪೂರ ಅವರ ಕಲಾಕೃತಿಗಳಿಂದ ಪ್ರೇರಿತರಾದ ಮ್ಯಾದಾರ್ ಅವರು ಉತ್ತಮ ಕಲಾಕೃತಿಗಳನ್ನು ಚಿತ್ರಿಸಿದ್ದಾರೆ ಎಂದು ವರ್ಣಿಸಿದರು.
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ ಮಾತನಾಡಿ, ಮ್ಯಾದಾರ್ ಅವರು ತಮ್ಮ ಕಲಾಕೃತಿಗಳನ್ನು ಮಾರಾಟ ಮಾಡುವುದಿಲ್ಲ, ಬದಲಾಗಿ ಕಲಾಕೃತಿಗಳನ್ನು ಸಂಗ್ರಹಿಸಿ ಗ್ಯಾಲರಿ ನಿರ್ಮಿಸಿ ಸದಾಕಾಲ ಎಲ್ಲರೂ ವೀಕ್ಷಿಸಿ ಸಂತೋಷಪಡುವಂತಾಗಲಿ ಎಂದು ಆಶಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಉದಯೋನ್ಮುಖ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಕಲಾವಿದರಿಗೆ ವೇದಿಕೆ ಒದಗಿಸಿರುವುದು ಸೂಕ್ತವಾಗಿದೆ. ಎಂದೆಂದಿಗೂ ಚಿತ್ರಕಲಾ ಪರಿಷತ್ತಿಗೆ ಸಹಾಯ ಮತ್ತು ಸಹಕಾರ ನೀಡುವುದಾಗಿ ತಿಳಿಸಿದರು.
ಪ್ರೊ ಎಂ.ಜೆ.ಕಮಲಾಕ್ಷಿ ಮಾಜಿ ಅಧ್ಯಕ್ಷರು ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಬೆಂಗಳೂರು ಅವರು ಮಾತನಾಡಿ, ಮ್ಯಾದಾರ್ ಅವರು ನಾಡಿನ ಪರಂಪರೆ, ಇತಿಹಾಸ, ಆದರ್ಶ ವ್ಯಕ್ತಿಗಳನ್ನು ನೆನಪಿಸುವಂತಹ ಅದರಲ್ಲೂ ವಿರಳವಾಗಿ ರಚಿಸಲಾಗುವ ಚುಕ್ಕಿ ಚಿತ್ರಗಳು ಅತ್ಯಂತ ಗುಣಮಟ್ಟದಲ್ಲಿ ಆಕರ್ಷಕವಾಗಿ ರಚನೆಗೊಂಡಿವೆ ಎಂದರು.
ಎಚ್.ಪಂಪಯ್ಯ ಶೆಟ್ಟಿ, ಮಲ್ಲಣ್ಣಗೌಡ ಇಂದುಪೂರ, ಎಂ.ಕೃಷ್ಣ , ಬಾಬು ಜಟ್ಕರ್, ಬಿ.ವಿ.ಚಂದ್ರಶೇಖರ, ರೇಣುಕಾದೇವಿ, ರಾಜ್ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.