ADVERTISEMENT

‘ಒತ್ತಡದ ಮಧ್ಯೆ ನಾಟಕಾಭಿನಯ ಶ್ಲಾಘನೀಯ’

ಒತ್ತಡದ ಮಧ್ಯೆ ನಾಟಕ ಅಭಿನಯ ಶ್ಲಾಘನೀಯ: ಶಿವಾನಂದ ತಗಡೂರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 9:37 IST
Last Updated 2 ಡಿಸೆಂಬರ್ 2019, 9:37 IST
ರಾಯಚೂರಿನ ರಂಗಮಂದಿರದಲ್ಲಿ ಶನಿವಾರ ನಡೆದ ‘ಅಣ್ಣ–ತಂಗಿ ನಾಟಕ ಪ್ರದರ್ಶನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಚಾಲನೆ ನೀಡಿದರು
ರಾಯಚೂರಿನ ರಂಗಮಂದಿರದಲ್ಲಿ ಶನಿವಾರ ನಡೆದ ‘ಅಣ್ಣ–ತಂಗಿ ನಾಟಕ ಪ್ರದರ್ಶನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಚಾಲನೆ ನೀಡಿದರು   

ರಾಯಚೂರು: ‘ಮಾಧ್ಯಮ ಕ್ಷೇತ್ರದಲ್ಲಿ ಬಿಡುವಿಲ್ಲದೆ ಒತ್ತಡದ ಮಧ್ಯೆ ಸೇವೆ ಸಲ್ಲಿಸುವ ಪತ್ರಕರ್ತರು ಇಂದು ನಾಟಕದಲ್ಲಿ ಅಭಿನಯಿಸುತ್ತಿರುವುದು ಶ್ಲಾಘನೀಯ’ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ನಗರದ ರಂಗಮಂದಿರದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ರಿಪೋಟರ್ಸ್ ಗಿಲ್ಡ್ ಹಾಗೂ ವಾರ್ತಾ ಇಲಾಖೆ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಅಣ್ಣ–ತಂಗಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಟಿ.ವಿಗಳು ಬಂದ ನಂತರ ರಂಗಭೂಮಿ ಅಳಿವಿನ ಅಂಚಿಗೆ ತಳ್ಳಲಾಗಿದೆ. ಆದರೆ, ರಂಗಭೂಮಿ ಗಟ್ಟಿಯಾಗಿ ಬೇರೂರಿದ್ದು, ಗ್ರಾಮೀಣ ಭಾಗದಲ್ಲಿ, ಅದಕ್ಕೆ ಅತಿ ಹೆಚ್ಚಾಗಿ ಅಲ್ಲಿಯೇ ನಾಟಕ ಪ್ರದರ್ಶನಗಳು ತೆರೆ ಕಾಣುತ್ತವೆ’ ಎಂದರು.

ADVERTISEMENT

ನಿವೃತ್ತ ಶಿಕ್ಷಕ ಕೆ.ಕರಿಯಪ್ಪ ಮಾತನಾಡಿ, ‘ಪತ್ರಕರ್ತರು ತಮ್ಮ ಕಾಯಕ ಮಾಡುತ್ತ ಒತ್ತಡದ ಸನ್ನಿವೇಶದಲ್ಲಿ ನಾಟಕದಲ್ಲಿ ಅಭಿನಯಿಸಿ ರಂಗಭೂಮಿ ಕಲೆಯನ್ನು ಬೆಳೆಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪತ್ರಕರ್ತರಿಗೆ ಬಹುಮಾನ ವಿತರಿಸಲಾಯಿತು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ರವಿರಾಜ, ರಂಗಕರ್ಮಿ ವಿ.ಎನ್.ಅಕ್ಕಿ, ದುರುಗಮ್ಮ ಕರಡಿಗುಡ್ಡ, ರಂಗ ನಿರ್ದೇಶಕ ರಾಜಗೋಪಾಲ ಚಿಕ್ಕಸುಗೂರು, ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ನಾಗಡದಿನ್ನಿ ಹಾಗೂ ಪತ್ರಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.