ಮಾನ್ವಿ: ಪಟ್ಟಣದಲ್ಲಿ ಹಿರಿಯ ಮುಖಂಡ ಎಂ.ಈರಣ್ಣ ಅವರ 64ನೇ ಜನ್ಮದಿನಾಚರಣೆ ಪ್ರಯುಕ್ತ ಅವರ ಅಭಿಮಾನಿ ಬಳಗ ಶನಿವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ಮೇಳ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ’ ಹಿರಿಯ ಮುಖಂಡ ಎಂ.ಈರಣ್ಣ ಅವರ ಸಮಾಜಮುಖಿ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಸೇವೆ ಶ್ಲಾಘನೀಯ. ಜನ್ಮದಿನ ಆಚರಣೆ ಅಂಗವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಧಾರವಾಡದ ಶಿಕ್ಷಣ ತಜ್ಞ ಡಾ.ನಾಗರಾಜ ಎಚ್.ಎನ್ ಅವರು, ‘ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರ ಮುಂದೇನು?’ ಕುರಿತು ವಿಷಯ ಮಂಡಿಸಿದರು.
‘ ಪಾಲಕರು ಮಕ್ಕಳ ಕಾಲೇಜು ಪ್ರವೇಶ, ಕೋರ್ಸ್ಗಳ ಆಯ್ಕೆ ವಿಚಾರದಲ್ಲಿ ಸ್ವಯಂ ನಿರ್ಧಾರ ಕೈಗೊಳ್ಳದೆ ಮಕ್ಕಳ ಆಸಕ್ತಿಗನುಗುಣವಾಗಿ ಉನ್ನತ ವ್ಯಾಸಂಗದ ಅವಕಾಶ ಕಲ್ಪಿಸಬೇಕು’ ಎಂದು ಅವರು ಸಲಹೆ ನೀಡಿದರು.
ಉಪನ್ಯಾಸಕ ರಮೇಶಬಾಬು ಯಾಳಗಿ ಅವರು, ‘ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಪ್ರೇರಣೆ’ ಕುರಿತು ವಿಷಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಮಾನ್ವಿ ಹಾಗೂ ಸಿರವಾರ ತಾಲ್ಲೂಕಿನಲ್ಲಿ 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಶೇ90ರಷ್ಟು ಫಲಿತಾಂಶ ಪಡೆದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಎಂ.ಈರಣ್ಣ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.
ಚೀಕಲಪರ್ವಿ ಸುಕ್ಷೇತ್ರದ ಸದಾಶಿವ ಸ್ವಾಮೀಜಿ, ಫಾದರ್ ಟಿ.ಜ್ಞಾನಪ್ರಕಾಶಂ, ಮೌಲಾನಾ ಮುಫ್ತಿ ಜಿಶಾನ್ ಖಾದ್ರಿ, ಗಂಗಾಧರಸ್ವಾಮಿ ಸುವರ್ಣಗಿರಿಮಠ ಸಾನ್ನಿಧ್ಯವಹಿಸಿದ್ದರು. ಮುಖಂಡರಾದ ಎಂ.ಪ್ರವೀಣಕುಮಾರ, ಜಾಕೀರ್ ಮೋಹಿನುದ್ದೀನ್ ಮತ್ತು ಎಂ.ಈರಣ್ಣ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು. ಕೆ.ಅಜೇಯಕುಮಾರ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.