ADVERTISEMENT

ರಾಯಚೂರು: ನೌಕರರ ಸಮಸ್ಯೆ ಪರಿಹಾರಕ್ಕೆ ಬದ್ಧ -ಮಹಾಂತೇಶ ಬಿರಾದಾರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 3:01 IST
Last Updated 4 ಅಕ್ಟೋಬರ್ 2021, 3:01 IST

ರಾಯಚೂರು: ಸರ್ಕಾರಿ ನೌಕರರು ಎಲ್ಲರೂ ಒಂದೇ. ಸಮಸ್ಯೆ ಬಂದಾಗ ಒಂದಾಗಿ ಬಗೆಹರಿಸಲು ಕೈಜೋಡಿಸಬೇಕು. ರಾಜ್ಯದ ಆರೋಗ್ಯ ಇಲಾಖೆಯ ನೌಕರರ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ನೌಕರರ ಸಂಘವು ಬದ್ಧವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ ನಡೆದ ಕಲ್ಯಾಣ ಕರ್ನಾಟಕದ ಆರೋಗ್ಯ ಇಲಾಖೆಯ ನೌಕರರ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು.

ಸರ್ಕಾರಿ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಸದಾ ಬದ್ದವಾಗಿದ್ದು, ಅವರಿಗೆ ಸಿಗಬೇಕಾದ ಪ್ರವಾಸ ಭತ್ಯೆ ವಿಶೇಷ ಭತ್ಯೆ, ಸೇವಾ ಭದ್ರತೆ ಹಾಗೂ 371 (ಜೆ) ಪ್ರಕಾರ ಬಡ್ತಿ ಇತರೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಘದಿಂದ ಕೆಲಸ ಮಾಡಲಾಗುತ್ತಿದೆ. ಈಚೆಗೆ ನೌಕರರ ಸಂಘದ ಪ್ರಯತ್ನದ ಫಲವಾಗಿ ಆರೋಗ್ಯ ಇಲಾಖೆಯ ನೌಕರರ ಪದನಾಮ ಬದಲಾವಣೆ ಆಗಿದೆ. ಕೋವಿಡ್ ವಿಶೇಷ ಭತ್ಯೆ ನೀಡಲಾಗಿದೆ ಹಾಗೂ ಪ್ರತಿ ತಿಂಗಳು ವೇತನ ದೊರಯುವಂತಾಗಿದೆ ಎಂದರು.

ADVERTISEMENT

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನೇತೃತ್ವದಲ್ಲಿ ಈಗಾಗಲೇ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿದ್ದು ಮುಂದಿನ ದಿನಗಳಲ್ಲಿ ಆರೋಗ್ಯ ಸಂಜೀವಿನಿ ಯೋಜನೆ, ಕೇಂದ್ರ ಮಾದರಿ ವೇತನ ಹಾಗೂ ನೂತನ ಪಿಂಚಣಿ ಯೋಜನೆ(ಎನ್‍ಪಿಎಸ್)ಯನ್ನು ರದ್ದಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆಯ ನೌಕರರ ಬ್ಯಾಂಕ್ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ರಂಗಾರಾವ್ ಐಕೂರು ಮಾತನಾಡಿದರು. ಆರೋಗ್ಯ ಇಲಾಖೆಯ ನೌಕರರ ಅಧ್ಯಕ್ಷ ಗುರುನಾಥರೆಡ್ಡಿ, ರಂಗಾರಾವ್, ಸೋಮಪ್ಪ, ಮಂಜುಳಾ, ಗೌರಮ್ಮ ವಿವಿಧ ತಾಲ್ಲೂಕು, ಜಿಲ್ಲೆಯ ಪದಾಧಿಕಾರಿಗಳು ಹಾಗೂ ನೌಕರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.