ಲಿಂಗಸುಗೂರು: ‘ವಿಧಾನಸಭಾ ಕ್ಷೇತ್ರ ಪುನರವಿಂಗಡನೆಯಾಗಿ ಸಾಮಾನ್ಯ ಕ್ಷೇತ್ರವಾದರೂ ನಾನೇ ಸ್ಪರ್ಧೆ ಮಾಡುತ್ತೇನೆ. ಕಾರ್ಯಕರ್ತರು ಎದೆಗುಂದದೇ ಗಟ್ಟಿಯಾಗಿರಬೇಕು’ ಎಂದು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಎಸ್.ಸಿ ಘಟಕದ ನೂತನ ಅಧ್ಯಕ್ಷರಾಗಿ ಉಮೇಶ್ ಹುನಕುಂಟಿ ಅವರಿಗೆ ಆದೇಶ ಪ್ರತಿ ವಿತರಿಸಿ ಅವರು ಮಾತನಾಡಿದರು.
‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷದ ಮುಖಂಡರಿಂದಲೇ ನಾನು ಸೋತಿದ್ದೇನೆ ವಿನಃ ಕಾರ್ಯಕರ್ತರಿಂದಲ್ಲ. ಕಾರ್ಯಕರ್ತರೇ ನನಗೆ ದೊಡ್ಡ ಶಕ್ತಿ. ಕೆಆರ್ಪಿ ಪಕ್ಷದ ಅಭ್ಯರ್ಥಿಯೊಂದಿಗೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಒಳಸಂಚು ಮಾಡಿರುವುದು ಕ್ಷೇತ್ರ ಜನತೆಗೆ ಗೊತ್ತಿರುವ ವಿಚಾರವಾಗಿದೆ. ನಮ್ಮ ಪಕ್ಷವೇ ಆಡಳಿತದಲ್ಲಿತ್ತು. ನಾನು ಗೆದ್ದಿದ್ದರೆ ಕ್ಷೇತ್ರ ಬಹಳಷ್ಟು ಅಭಿವೃದ್ಧಿಯಾಗುತ್ತಿತ್ತು. ನಾನು ಕ್ಷೇತ್ರ ಬಿಟ್ಟು ಹೋಗಲ್ಲ, ಕ್ಷೇತ್ರದಲ್ಲಿಯೇ ಇರುವೆ’ ಎಂದರು.
‘ಮುಬರುವ ವಿಧಾನಸಭಾ ಚುನಾವಣೆ ವೇಳೆಗೆ ಎಸ್ಸಿ ಮೀಸಲು ಕ್ಷೇತ್ರ ಪುನರ್ ವಿಂಗಡನೆಯಾಗಿ ಸಾಮಾನ್ಯ ಕ್ಷೇತ್ರವಾಗುತ್ತದೆ ಎಂಬ ಗುಲ್ಲು ಎದ್ದಿದೆ. ಆದರೆ ಎಸ್ಸಿ ಕ್ಷೇತ್ರವಾದರೂ ಇಲ್ಲವೇ ಸಾಮಾನ್ಯ ಕ್ಷೇತ್ರವಾದರೂ ಸರಿ ನಾನು ಸ್ಪರ್ಧೆ ಮಾಡುತ್ತೇನೆ’ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಗುತ್ತಿಗೆದಾರ, ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಜಯಲಕ್ಷ್ಮಿ ದೇಸಾಯಿ, ಶರಣಬಸವ ಮೇಟಿ, ಶಿವಣ್ಣ ನಾಯಕ, ಮಹ್ಮದ್ ರಫಿ, ಲಿಂಗರಾಜ ಹಟ್ಟಿ, ಯೂನೂಸ್ ಮುಫ್ತಿಸಾಬ, ಮುದುಕಪ್ಪ ನೀರಲಕೇರಿ, ಮುನ್ನ ಖಾಜಿ, ಹಾಜಿ ಬಾಬು ಕರಡಕಲ್, ಗದ್ದೇನಗೌಡ ಜಾಗಿರನಂದಿಹಾಳ, ವಿಶ್ವಕ್ರಾಂತಿ, ಗುಂಡಪ್ಪ ಸಾಹುಕಾರ, ಸಿದ್ದು ಹಿರೇಮನಿ, ರಾಘವೇಂದ್ರ ತುಪ್ಪದ್, ವೀರೇಶ ಭೋವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.