ಸಿರವಾರ: ಮಣ್ಣೆತ್ತಿನ ಅಮಾವಾಸ್ಯೆ ಕಾರಣಕ್ಕೆ ಪಿಒಪಿಯ ಬಣ್ಣ ಬಣ್ಣದ ಎತ್ತಿನ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ರೈತರನ್ನು ಆಕರ್ಷಿಸುತ್ತಿವೆ.
ರೈತರು ತಮ್ಮ ಹೊಲದಲ್ಲಿನ ಎರೆಮಣ್ಣಿನಿಂದ ಎತ್ತುಗಳ ಮೂರ್ತಿಗಳನ್ನು ಮಾಡಿ ಅಮಾವಾಸ್ಯೆಯ ದಿನ ಪೂಜಿಸಿ ನಂತರ ಮನೆಯ ಮಾಳಿಗೆಯ ಮೇಲೆ ಇಡುವರು. ಮಳೆಯಿಂದ ಎತ್ತಿನ ಮೂರ್ತಿಗಳು ಎಷ್ಟು ಬೇಗ ಕರಗುತ್ತವೆಯೋ ಅಷ್ಟು ಸಮೃದ್ಧಿ ಮಳೆ ಆಗುತ್ತದೆ ಎಂಬುದು ರೈತರ ನಂಬಿಕೆ.
ಪಿಒಪಿ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ: ಕೊರೊನಾ ಕಾರಣಕ್ಕೆ ಎರಡು ವರ್ಷಗಳಿಂದ ಎತ್ತಿನ ಮೂರ್ತಿ ಮಾರಾಟ ಅಷ್ಟಾಗಿ ನಡೆದಿರಲಿಲ್ಲ. ಆದರೆ ಈ ವರ್ಷ ಕೊರೊನಾ ನಿಯಮಗಳಲ್ಲಿ ಸಡಿಲಿಕೆ ಇರುವುದರಿಂದ ಹತ್ತಾರು ವ್ಯಾಪಾರಸ್ಥರು ರಸ್ತೆ ಬದಿ ಹಾಗೂ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ತೆರೆದಿದ್ದಾರೆ.
ಮಣ್ಣಿನ ಎತ್ತುಗಳಿಗಿಂತ ಪಿಒಪಿಯಿಂದ ಮಾಡಿದ ಎತ್ತಿನ ಮೂರ್ತಿಗಳು ಆಕರ್ಷಿಸುತ್ತಿವೆ. ಗಾತ್ರಕ್ಕನುಗುಣವಾಗಿ ಒಂದು ಜತೆ ಎತ್ತಿಗೆ ₹100 ರಿಂದ ₹ 1000 ದವರೆಗೂ ತೆಗೆದುಕೊಳ್ಳಲಾಗುತ್ತಿದೆ. ರೈತರು ಬಣ್ಣ ಬಣ್ಣದ ಮೂರ್ತಿಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದು, ಮಣ್ಣಿನ ಎತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಮಾರಾಟಗಾರ ಅಮರೇಶ ಕುಂಬಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.